ಉತ್ತರ ಪ್ರದೇಶ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಹಸ್ತಿನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಶಾಲಾ ಪ್ರಾಂಶುಪಾಲರ ಸಾವಿನ ಪ್ರಕರಣಕ್ಕೆ ಇದೀಗ ಬೆಚ್ಚಿಬೀಳಿಸುವ ತಿರುವು ಸಿಕ್ಕಿದೆ. ಆರಂಭದಲ್ಲಿ ಹಾವು ಕಡಿತದಿಂದ ಸಂಭವಿಸಿದ ಸಹಜ ಸಾವು ಎಂದು ಭಾವಿಸಲಾಗಿದ್ದ ಪ್ರಕರಣ, ಈಗ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ರೂಪಿಸಿದ ಸಂಚಿನ ಕೊಲೆ ಎಂಬ ಆರೋಪಕ್ಕೆ ತಿರುಗಿದೆ.
ಮೃತ ಅತುಲ್ ಕುಮಾರ್ ಖಾಸಗಿ ಶಾಲೆಯ ಆಡಳಿತ ನಡೆಸುತ್ತಿದ್ದು, ಅವರ ಪತ್ನಿ ದಾಮಿನಿ ಅದೇ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದರು. ಶಾಲೆಯ ಬಸ್ ಚಾಲಕರಾಗಿದ್ದ ತುಷಾರ್ ಎಂಬಾತನೊಂದಿಗೆ ದಾಮಿನಿಗೆ ಅಕ್ರಮ ಸಂಬಂಧವಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧದ ಬಗ್ಗೆ ಅತುಲ್ ಕುಮಾರ್ಗೆ ಮಾಹಿತಿ ದೊರೆತಿದ್ದು, ತುಷಾರ್ನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಕೆಲಸ ಕಳೆದುಕೊಳ್ಳುವ ಭೀತಿ ಹಾಗೂ ತಮ್ಮ ಸಂಬಂಧ ಬಹಿರಂಗವಾಗುವ ಆತಂಕದಿಂದ ದಾಮಿನಿ ಮತ್ತು ತುಷಾರ್ ಅತುಲ್ ಕುಮಾರ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಅಪಘಾತದ ಯತ್ನ, ಬಳಿಕ ಹಾವನ್ನೇ ಆಯುಧವನ್ನಾಗಿಸಿದ ಆರೋಪ
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಮೊದಲು ರಸ್ತೆ ಅಪಘಾತದ ಮೂಲಕ ಅತುಲ್ ಕುಮಾರ್ ಅವರನ್ನು ಕೊಲ್ಲಲು ಯತ್ನಿಸಿದ್ದರು. ಆದರೆ ಆ ಯೋಜನೆ ವಿಫಲವಾಗಿತ್ತು. ಬಳಿಕ ಹಾವು ಕಡಿತದಿಂದ ಮೃತಪಟ್ಟ ಮತ್ತೊಂದು ಘಟನೆಯಿಂದ ಪ್ರೇರಿತರಾಗಿ, ಕೊಲೆಯನ್ನು ಸಹಜ ಹಾವು ಕಡಿತದಂತೆ ತೋರಿಸುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಯೋಜನೆಯಂತೆ, ದಾಮಿನಿ ಪತಿಗೆ ಕುಡಿಯುವ ಹಾಲಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿದ್ದಳು. ಅತುಲ್ ಕುಮಾರ್ ಗಾಢ ನಿದ್ರೆಗೆ ಜಾರಿದ ಬಳಿಕ ಮಕ್ಕಳನ್ನು ಬೇರೆ ಕೋಣೆಗೆ ಕಳುಹಿಸಿ, ತುಷಾರ್ ತಂದಿದ್ದ ವಿಷಪೂರಿತ ಹಾವನ್ನು ಹಾಸಿಗೆಯ ಮೇಲೆ ಬಿಟ್ಟಿದ್ದರು. ಹಾವು ಕಡಿತದಿಂದ ಅತುಲ್ ಕುಮಾರ್ ಮೃತಪಟ್ಟಿದ್ದು, ಇದನ್ನು ಸಹಜ ಅಪಘಾತ ಎಂದು ಬಿಂಬಿಸಲು ಇಬ್ಬರೂ ಪ್ರಯತ್ನಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಗೂಗಲ್ನಲ್ಲಿ ಕೊಲೆ ವಿಧಾನಗಳ ಹುಡುಕಾಟ!
ಪ್ರಕರಣದ ತನಿಖೆ ವೇಳೆ ಆರೋಪಿಗಳು ಗೂಗಲ್ನಲ್ಲಿ ವಿವಿಧ ಕೊಲೆ ವಿಧಾನಗಳ ಕುರಿತು ಮಾಹಿತಿ ಹುಡುಕಿದ್ದರೆಂಬುದು ಪೊಲೀಸರ ಗಮನಕ್ಕೆ ಬಂದಿದೆ. ಈ ಡಿಜಿಟಲ್ ಸಾಕ್ಷ್ಯಗಳು ತನಿಖೆಗೆ ಮಹತ್ವದ ಸುಳಿವು ನೀಡಿವೆ.
ಪ್ರಸ್ತುತ ದಾಮಿನಿ ಮತ್ತು ತುಷಾರ್ ಅವರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.
ಈ ಘಟನೆ ಹಸ್ತಿನಾಪುರ ಪ್ರದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯರು ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ನ್ಯಾಯಾಲಯದ ವಿಚಾರಣೆ ವೇಳೆ ಇನ್ನಷ್ಟು ಸತ್ಯಾಂಶಗಳು ಹೊರಬರುವ ಸಾಧ್ಯತೆ ಇದೆ.
