
ಸಾಗರ: ಜಮೀನಿಗೆ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿ ಎರಡು ಗಂಡು ಜಿಂಕೆಗಳನ್ನು ವಿದ್ಯುತ್ ಸ್ಪರ್ಶದಿಂದ ಸಾಯಿಸಿ, ಅವುಗಳ ಮಾಂಸವನ್ನು ಜಮೀನಿನಲ್ಲೇ ತಯಾರಿಸುತ್ತಿದ್ದ ಆರೋಪಿಗಳ ವಿರುದ್ಧ ಶರಾವತಿ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಸಾಗರ ತಾಲೂಕಿನ ಸಾಗರ–ಕೋಗಾರ್ ವನ್ಯಜೀವಿ ವಲಯದ ನಾಗವಳ್ಳಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಆಧರಿಸಿ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ ಹಾಗೂ ಎಸಿಎಫ್ ಗುರುರಾಜ ಸಿ.ಬಿ. ಅವರ ಮಾರ್ಗದರ್ಶನದಲ್ಲಿ, ಕೋಗಾರ್ ಆರ್ಎಫ್ಒ ಧನಂಜಯ ನಾಯ್ಕ ನೇತೃತ್ವದ ತಂಡ ದಾಳಿ ನಡೆಸಿದೆ.
ನಾಗವಳ್ಳಿ ಗ್ರಾಮದ ಸರ್ವೆ ನಂಬರ್ 72ರಲ್ಲಿ ಶಾಜಿ ಬಿನ್ ವರ್ಗೀಸ್ ಎಂಬುವವರು ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಎರಡು ಗಂಡು ಜಿಂಕೆಗಳನ್ನು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿಯ ಮೂಲಕ ಸಾಯಿಸಿರುವುದು ಪತ್ತೆಯಾಗಿದೆ. ಬಳಿಕ ಜಿಂಕೆಗಳ ಮಾಂಸವನ್ನು ಅಲ್ಲಿಯೇ ತಯಾರಿಸಲಾಗಿತ್ತು. ಸ್ವಲ್ಪ ಮಾಂಸವನ್ನು ಬೇಯಿಸಲಾಗಿದ್ದು, ಮತ್ತಷ್ಟು ಮಾಂಸವನ್ನು ಬಳಸಿ ಸಾಂಬಾರ್ ಸೇರಿದಂತೆ ಆಹಾರ ಪದಾರ್ಥಗಳನ್ನು ತಯಾರಿಸಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಇದಲ್ಲದೆ, ಜಿಂಕೆಗಳ ಉಳಿದ ಕಳೇಬರವನ್ನು ಮಣ್ಣಿನಲ್ಲಿ ಹೂತು ಹಾಕಿರುವ ಕುರುಹುಗಳೂ ಪತ್ತೆಯಾಗಿವೆ. ಸೆಪ್ಟೆಂಬರ್ 2ರಂದು ಅರಣ್ಯಾಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಈ ಅಕ್ರಮ ಬೇಟೆಯ ಪ್ರಕರಣ ಬೆಳಕಿಗೆ ಬಂದಿದೆ.
ಎರಡು ಜಿಂಕೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ವ್ಯಾಪ್ತಿಗೆ ಒಳಪಡುವ ಷೆಡ್ಯೂಲ್–2ರ ಚುಕ್ಕೆ ಜಿಂಕೆ (Axis axis) ಪ್ರಭೇದಕ್ಕೆ ಸೇರಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಶಾಜಿ ಬಿನ್ ವರ್ಗೀಸ್, ಎ2 ಭಾನು ಬಿನ್ ಗಣು, ಎ3 ರಾಮ ಬಿನ್ ಮಂಜ ಮರಾರಿ, ಎ4 ಶ್ರೀಧರ ಬಿನ್ ದುರ್ಗಪ್ಪ ನಾಯ್ಕ, ಎ5 ಶಿವ ಬಿನ್ ಗಣು ಹಾಗೂ ಎ6 ಮಹೇಶ ಬಿನ್ ಮಂಗಳ ಗೊಂಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಪೈಕಿ ಭಾನು, ಶಿವ ಹಾಗೂ ಮಹೇಶ ಅವರನ್ನು ಬಂಧಿಸಲಾಗಿದ್ದು, ಶಾಜಿ, ರಾಮ ಮತ್ತು ಶ್ರೀಧರ ತಲೆಮರೆಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಗುರುರಾಜ ತೊಳಬಂದಿ, ಕಿರಣ ಎ. ಬಿದರಳ್ಳಿ, ಸಂಧ್ಯಾ ಎಸ್., ಗಸ್ತು ಅರಣ್ಯ ಪಾಲಕರಾದ ದೀಪಕ ಎಸ್. ಪ್ರಭು ಹಾಗೂ ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಕರಣದ ತನಿಖೆ ಮುಂದುವರಿದಿದ್ದು, ಅಕ್ರಮ ಬೇಟೆ ಹಾಗೂ ವಿದ್ಯುತ್ ತಂತಿ ಅಳವಡಿಕೆಯ ಹಿಂದಿರುವ ಸಂಪೂರ್ಣ ಜಾಲದ ಕುರಿತು ಅರಣ್ಯಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.






