ಮಹಾರಾಷ್ಟ್ರದಲ್ಲಿ ಪ್ರೇಮ, ವಂಚನೆ ಹಾಗೂ ಸೇಡಿನ ಸುತ್ತ ಸುತ್ತುವ ಕುತೂಹಲಕಾರಿ ಪ್ರಕರಣವೊಂದು ಭಾರೀ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಜಾಲವನ್ನು ಬಯಲಿಗೆಳೆದಿದೆ. ಪ್ರೇಯಸಿಯನ್ನು ಸರ್ಕಾರಿ ಅಧಿಕಾರಿಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿಸಿದ್ದ ಎನ್ನಲಾದ ಪ್ರಿಯಕರನೇ, ಆಕೆಯೊಂದಿಗೆ ಬ್ರೇಕಪ್ ಆದ ಬಳಿಕ ಹಗರಣದ ರಹಸ್ಯವನ್ನು ಅಧಿಕಾರಿಗಳಿಗೆ ತಿಳಿಸಿದ್ದಾನೆ.

ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್ ಇನ್‌ಸ್ಪೆಕ್ಟರ್ ಪರೀಕ್ಷೆಗೆ ಋತುಜಾ ಎಂಬ ಯುವತಿ ಸಿದ್ಧತೆ ನಡೆಸುತ್ತಿದ್ದಳು ಎನ್ನಲಾಗಿದೆ. ಆಕೆಯನ್ನು ಹೇಗಾದರೂ ಮಾಡಿ ಸರ್ಕಾರಿ ಹುದ್ದೆಗೆ ಆಯ್ಕೆ ಮಾಡಿಸಬೇಕು ಎಂದು ಆಕೆಯ ಪ್ರಿಯಕರ ಗೌರವ್ ನಿರ್ಧರಿಸಿದ್ದ.

ಪರೀಕ್ಷೆಗೆ ಕೇವಲ ಎರಡು ದಿನಗಳಿರುವಾಗ ಗೌರವ್ ಲೀಕ್ ಆಗಿದ್ದ ಪ್ರಶ್ನೆಪತ್ರಿಕೆಯನ್ನು ಪಡೆದು ಋತುಜಾಗೆ ನೀಡಿದ್ದಾನೆ ಎನ್ನಲಾಗಿದೆ. ಆ ಪ್ರಶ್ನೆಪತ್ರಿಕೆಯ ನೆರವಿನಿಂದ ಪರೀಕ್ಷೆ ಬರೆದ ಋತುಜಾ, ಮಹಾರಾಷ್ಟ್ರ ಮಟ್ಟದಲ್ಲಿ 7ನೇ ರ‍್ಯಾಂಕ್ ಪಡೆದು ಆಯ್ಕೆಯಾಗಿದ್ದಳು ಎನ್ನಲಾಗಿದೆ.

ಆದರೆ, ಋತುಜಾ ಆಯ್ಕೆಯಾದ ಬಳಿಕ ಕಥೆ ಮತ್ತೊಂದು ತಿರುವು ಪಡೆದುಕೊಂಡಿದೆ. ಗೌರವ್‌ನನ್ನು ಮದುವೆಯಾಗಲು ಆಕೆ ನಿರಾಕರಿಸಿ, ಆತನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾಳೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಗೌರವ್, ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ.

ಇದೇ ವೇಳೆ ಎಂಪಿಸಿಎಸ್‌ಗೆ ಗೌಪ್ಯ ಇಮೇಲ್ ಕಳುಹಿಸಿದ ಗೌರವ್, ಪ್ರಶ್ನೆಪತ್ರಿಕೆ ಸೋರಿಕೆಯ ಸಂಪೂರ್ಣ ವಿವರಗಳನ್ನು ಅಧಿಕಾರಿಗಳಿಗೆ ತಿಳಿಸಿದ್ದಾನೆ. ಬಳಿಕ ತಾನು ತಮಾಷೆಗಾಗಿ ಇಮೇಲ್ ಕಳುಹಿಸಿದ್ದಾಗಿ ಮತ್ತೊಂದು ಇಮೇಲ್ ಕಳುಹಿಸಿದರೂ, ಅಷ್ಟರಲ್ಲಾಗಲೇ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.

ಮೊದಲ ಇಮೇಲ್ ಆಧರಿಸಿ ಎಂಪಿಸಿಎಸ್ ಅಧಿಕಾರಿಗಳು ಮುಂಬೈ ಕ್ರೈಂ ಬ್ರಾಂಚ್‌ಗೆ ದೂರು ನೀಡಿದ್ದು, ತನಿಖೆ ಚುರುಕುಗೊಂಡಿದೆ. ತನಿಖೆಯಲ್ಲಿ ಎಂಪಿಸಿಎಸ್‌ನ ಕೆಲವು ಅಧಿಕಾರಿಗಳು ಹಾಗೂ ಕೋಚಿಂಗ್ ಅಕಾಡೆಮಿಯವರ ಶಾಮೀಲಾತಿ ಇರುವ ಶಂಕೆ ವ್ಯಕ್ತವಾಗಿದ್ದು, ಪ್ರಶ್ನೆಪತ್ರಿಕೆಯನ್ನು ಸುಮಾರು ₹4 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂಬ ಆರೋಪವೂ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಪ್ರಶ್ನೆಪತ್ರಿಕೆ ಸೋರಿಕೆಯ ನೆರವಿನಿಂದ 7ನೇ ರ‍್ಯಾಂಕ್ ಪಡೆದಿದ್ದಾರೆ ಎನ್ನಲಾದ ಋತುಜಾ ಅವರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ.

ಪ್ರೇಯಸಿಯನ್ನು ಅಧಿಕಾರಿಯನ್ನಾಗಿ ಮಾಡಲು ಆರಂಭವಾದ ಪ್ರಶ್ನೆಪತ್ರಿಕೆ ಸೋರಿಕೆ, ಬ್ರೇಕಪ್ ಬಳಿಕ ಪ್ರಿಯಕರನ ಸೇಡಿನಿಂದಲೇ ಬಯಲಾಗಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

Related News

error: Content is protected !!