ಬೆಂಗಳೂರು: ರಾಜ್ಯ ಕಾಂಗ್ರೆಸ್ನೊಳಗಿನ ನಾಯಕತ್ವದ ಗೊಂದಲ ಮತ್ತು ಅಸಮಾಧಾನದ ನಡುವೆಯೇ ಅಹಿಂದ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಕ್ಷವು ಅಹಿಂದ ವರ್ಗವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಸಂಘಟನೆ, ಅಗತ್ಯವಿದ್ದರೆ 2028ರ ವೇಳೆಗೆ ಹೊಸ ರಾಜಕೀಯ ಪಕ್ಷವನ್ನು ರಚಿಸುವ ಎಚ್ಚರಿಕೆ ನೀಡಿದೆ.
ಅಹಿಂದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಿವಣ್ಣ ಅವರು ಮಾತನಾಡಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ‘‘ಕಾಂಗ್ರೆಸ್ನಿಂದ ಅಹಿಂದ ವರ್ಗಕ್ಕೆ ಅನ್ಯಾಯವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ 2028ಕ್ಕೆ ರಾಷ್ಟ್ರೀಯ ಅಹಿಂದ ಪಕ್ಷವನ್ನು ರಚಿಸಿ ಚುನಾವಣೆಗೆ ಇಳಿಯುತ್ತೇವೆ’’ ಎಂದು ಎಚ್ಚರಿಕೆ ನೀಡಿದ್ದಾರೆ.
ಅವರು ಮುಂದುವರಿಸಿ, ಕೆಲ ನಿರ್ಧಾರಗಳು ಒಂದು ಕುಟುಂಬದ ಪರವಾಗಿ ನಡೆಯುತ್ತಿವೆ ಎಂದು ಆರೋಪಿಸಿ, ಅಲ್ಪಸಂಖ್ಯಾತರಿಗೆ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದರು. ‘‘ನಾವು ಬೆಂಬಲ ನೀಡಿದರೂ ನಮಗೆ ಟಿಕೆಟ್ ನೀಡುವುದಿಲ್ಲ. ನಮ್ಮ ಮತ ಕೇಳಿ ಬಳಿಕ ನಮ್ಮನ್ನೇ ಕಡೆಗಣಿಸುತ್ತಾರೆ’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ, ದಲಿತ ಮುಖ್ಯಮಂತ್ರಿ ನೇಮಕ ಮಾಡುವಂತೆ ಆಗ್ರಹಿಸಿದ್ದಾರೆ. ಜಿ. ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ನ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಶಿವಣ್ಣ ವಾಗ್ದಾಳಿ ನಡೆಸಿದರು. ‘‘ರಾಜ್ಯದಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದರೆ ನಾಯಕರು ಜನರ ಸಮಸ್ಯೆಗಿಂತ ತಮ್ಮ ವೈಯಕ್ತಿಕ ಜೀವನದಲ್ಲೇ ನಿರತರಾಗಿದ್ದಾರೆ’’ ಎಂದು ಟೀಕಿಸಿದರು.
ಪ್ರಾತಿನಿಧ್ಯ ನೀಡದಿದ್ದರೆ ಕಠಿಣ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ ಅವರು, ಅಹಿಂದ ಸಮುದಾಯದ ನಿರ್ಲಕ್ಷ್ಯ ಮುಂದುವರಿದರೆ ಕಾಂಗ್ರೆಸ್ ಎದುರು ತೀವ್ರ ಸವಾಲು ಎದುರಾಗಲಿದೆ ಎಂದು ಹೇಳಿದರು.
