ಇಡೀ ಕುಟುಂಬದ ಮುದ್ದಿನ ಕಂದಮ್ಮನಾಗಿದ್ದ ಕೇವಲ ಎರಡೂವರೆ ವರ್ಷದ ದಿಲ್ ರೋಜ್‌ನ ದಾರುಣ ಹತ್ಯೆ ಪ್ರಕರಣ ಇಂದಿಗೂ ಮನಕಲಕುವ ಘಟನೆಯಾಗಿ ಉಳಿದಿದೆ. ನೆರೆಮನೆಯ ಮಹಿಳೆಯೊಬ್ಬಳು ಅಸೂಯೆ ಮತ್ತು ದ್ವೇಷದ ಕಾರಣದಿಂದ ಈ ಮುಗ್ಧ ಮಗುವಿನ ಜೀವ ತೆಗೆದಿದ್ದಳು. ಇದೀಗ ಆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಆರೋಪಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದು ಮತ್ತೆ ಪ್ರಕರಣವನ್ನು ಸುದ್ದಿಯಲ್ಲಿರಿಸಿದೆ.

ಮಾಹಿತಿಯ ಪ್ರಕಾರ, ದಿಲ್ ರೋಜ್ ಕುಟುಂಬದ ಎಲ್ಲರ ಪ್ರೀತಿಯ ಕಂದಮ್ಮಳಾಗಿದ್ದಳು. ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ವಿಚ್ಛೇದಿತ ಮಹಿಳೆ ನೀಲಂಗೆ ಕುಟುಂಬದ ಮೇಲಿದ್ದ ವೈಯಕ್ತಿಕ ದ್ವೇಷ ಮತ್ತು ಅಸೂಯೆ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಒಂದು ದಿನ ಮಗುವನ್ನು ಸ್ಕೂಟರ್‌ನಲ್ಲಿ ಸುತ್ತಾಡಿಸಿ ಕರೆತರುತ್ತೇನೆ ಎಂದು ನಂಬಿಸಿ ಕರೆದುಕೊಂಡು ಹೋದ ನೀಲಂ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾಳೆ.

ಹಲ್ಲೆಯಿಂದ ಮಗು ಕಿರುಚದಂತೆ ಅದರ ಬಾಯಿಗೆ ಮಣ್ಣು ತುರುಕಿ, ಜೀವಂತವಾಗಿದ್ದಾಗಲೇ ಸಣ್ಣ ಗುಂಡಿಯಲ್ಲಿ ಹೂತು ಹಾಕಿದ್ದಾಳೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಗು ಕಾಣೆಯಾಗುತ್ತಿದ್ದಂತೆಯೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ನೀಲಂ ಮಗುವನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಕ್ಕಿತ್ತು. ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರೂ, ಅಷ್ಟರಲ್ಲಾಗಲೇ ಮಗು ಉಸಿರುಗಟ್ಟಿ ಮೃತಪಟ್ಟಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಇದು ಅತ್ಯಂತ ಕ್ರೂರ ಹಾಗೂ ‘ವಿರಳಾತಿ ವಿರಳ’ ಪ್ರಕರಣ ಎಂದು ಪರಿಗಣಿಸಿ ನೀಲಂಗೆ ಮರಣದಂಡನೆ ವಿಧಿಸಿತ್ತು. ಆದರೆ ಇದೀಗ ಆ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

Related News

error: Content is protected !!