ಭಟ್ಕಳ: ವೆಂಕಟಾಪುರ ನದಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಚಿಪ್ಪಿಕಲ್ಲು ದುರಂತದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕುಟುಂಬದವರನ್ನು ಹಾಗೂ ಸ್ಥಳೀಯರನ್ನು ಮತ್ತಷ್ಟು ಶೋಕದಲ್ಲಿ ಮುಳುಗಿಸಿದೆ.
ಬೆಂಗ್ರೆ ಸಮೀಪದ ಮೋಳಿನಮನೆಯ ನಿವಾಸಿ ಆನಂದ ಅಣ್ಣಪ್ಪ ನಾಯ್ಕ (36) ಮೃತರು. ಇತ್ತೀಚೆಗೆ ತಟ್ಟಿಹಕ್ಕಲ ಹೊಳೆಯ ಬಳಿ ಚಿಪ್ಪಿಕಲ್ಲು ಆರಿಸುವ ವೇಳೆ ಸಂಭವಿಸಿದ್ದ ದುರಂತದಲ್ಲಿ 14 ಮಂದಿ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದು, ಅವರಲ್ಲಿ ಆನಂದ ಅವರ ತಾಯಿ ಲಕ್ಷಿ ನಾಯ್ಕ ಕೂಡ ಸೇರಿದ್ದರು.
ಕುಟುಂಬದವರ ಮಾಹಿತಿ ಪ್ರಕಾರ, ತಾಯಿಯ ಸಾವಿನ ಬಳಿಕ ಆನಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಅವರ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಮದ್ಯಪಾನದ ಚಟವೂ ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.
ಬುಧವಾರ ಮಧ್ಯಾಹ್ನ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಅವರು ಕಾಣೆಯಾಗಿದ್ದರು. ಬಳಿಕ ಮನೆಯ ಮೇಲ್ಚಾವಣಿ ಮೂಲಕ ಹೊರಗೆ ತೆರಳಿದ್ದ ಅವರು ಬಾವಿಗೆ ಬಿದ್ದಿರುವುದು ಪತ್ತೆಯಾಯಿತು. ಸ್ಥಳೀಯರ ನೆರವಿನಿಂದ ಮೃತದೇಹವನ್ನು ಹೊರತೆಗೆದು ಅಗತ್ಯ ಕ್ರಮ ಕೈಗೊಳ್ಳಲಾಯಿತು.
ಎಂ.ಕಾಂ ಪದವೀಧರರಾಗಿದ್ದ ಆನಂದ ಅವರಿಗೆ ಸೂಕ್ತ ಉದ್ಯೋಗ ದೊರೆಯದಿರುವುದೂ ಅವರ ಮಾನಸಿಕ ಒತ್ತಡಕ್ಕೆ ಕಾರಣವಾಗಿರಬಹುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ಕುರಿತು ಮೃತರ ತಂದೆ ಅಣ್ಣಪ್ಪ ನಾಯ್ಕ ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಾವಿನ ನಿಖರ ಕಾರಣ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
