ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಪತಿಯನ್ನೇ ಮರಣದ ಬಲೆಗೆ ಬೀಳಿಸಿ, ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿಸಿರುವ ಬೆಚ್ಚಿಬೀಳಿಸುವ ಘಟನೆ ದಕ್ಷಿಣ ಭಾರತದ ಗಡಿ ಭಾಗದಲ್ಲಿ ಬೆಳಕಿಗೆ ಬಂದಿದೆ. ಕೇವಲ ಒಂದು ವರ್ಷದ ಮಗುವಿನ ಕಣ್ಣೆದುರೇ ಈ ಕೃತ್ಯ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತ ರಮೇಶ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಎರಡು ವರ್ಷಗಳ ಹಿಂದೆ ಹಾಸಿನಿ ಅವರನ್ನು ವಿವಾಹವಾಗಿದ್ದು, ದಂಪತಿಗೆ ಒಂದು ವರ್ಷದ ಹೆಣ್ಣು ಮಗು ಇದೆ. ಮಂಗಳವಾರ ಸಂಜೆ ರಮೇಶ್, ಪತ್ನಿ ಹಾಗೂ ಮಗುವಿನೊಂದಿಗೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬೈಕ್ನಲ್ಲಿ ತೆರಳಿದ್ದರು. ಆದರೆ ರಾತ್ರಿ ಕಳೆದರೂ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಹಾಸಿನಿಯ ತಾಯಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ತನಿಖೆ ಆರಂಭಿಸಿದ ಪೊಲೀಸರು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹಲವು ಅನುಮಾನಾಸ್ಪದ ಸಂಗತಿಗಳು ಬೆಳಕಿಗೆ ಬಂದವು. ದೇವಸ್ಥಾನಕ್ಕೆ ಹೋಗುವ ವೇಳೆ ರಮೇಶ್, ಪತ್ನಿ ಮತ್ತು ಮಗುವಿನೊಂದಿಗೆ ಬೈಕ್ನಲ್ಲಿ ತೆರಳಿರುವುದು ಕಂಡುಬಂದರೆ, ವಾಪಸ್ ಬರುವ ದೃಶ್ಯದಲ್ಲಿ ಅದೇ ಬೈಕ್ನಲ್ಲಿ ಹಾಸಿನಿ ಇಬ್ಬರು ಅಪರಿಚಿತ ಯುವಕರೊಂದಿಗೆ ಪ್ರಯಾಣಿಸುತ್ತಿರುವುದು ದಾಖಲಾಗಿತ್ತು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಾಸಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ಸಂಚು ಬಯಲಾಯಿತು. ದೇವಸ್ಥಾನದಿಂದ ಹಿಂದಿರುಗುವಾಗ ಹಾಸಿನಿ ಉದ್ದೇಶಪೂರ್ವಕವಾಗಿ ತನ್ನ ಪರ್ಸ್ ಅನ್ನು ಘಾಟ್ ರಸ್ತೆಯಲ್ಲಿ ಬಿಸಾಡಿದ್ದಳು. ಬಳಿಕ ಸ್ವಲ್ಪ ದೂರ ಸಾಗಿದ ನಂತರ, “ನನ್ನ ಪರ್ಸ್ ಕೆಳಗೆ ಬಿದ್ದಿದೆ, ದಯವಿಟ್ಟು ತಂದುಕೊಡಿ” ಎಂದು ಪತಿ ರಮೇಶ್ ಅವರನ್ನು ಹಿಂದಕ್ಕೆ ಕಳುಹಿಸಿದ್ದಾಳೆ.
ರಮೇಶ್ ಪರ್ಸ್ ಹುಡುಕಲು ತೆರಳಿದ ಸ್ಥಳದಲ್ಲಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಹಾಸಿನಿಯ ಪ್ರಿಯಕರ ಮತ್ತು ಆತನ ಸ್ನೇಹಿತ ರಮೇಶ್ ಮೇಲೆ ಏಕಾಏಕಿ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಒಂದು ವರ್ಷದ ಮಗು ಕೂಡ ಸ್ಥಳದಲ್ಲೇ ಇದ್ದದ್ದು ಪ್ರಕರಣದ ಭೀಕರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕೃತ್ಯದ ಬಳಿಕ ಆರೋಪಿಗಳು ರಮೇಶ್ ಅವರ ಮೃತದೇಹವನ್ನು ಘಾಟ್ ರಸ್ತೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ಎಸೆದು, ಅವರ ಬೈಕ್ನಲ್ಲೇ ಹಾಸಿನಿಯೊಂದಿಗೆ ರೈಲ್ವೆ ನಿಲ್ದಾಣದತ್ತ ಪರಾರಿಯಾಗಿದ್ದರು. ಬಳಿಕ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹಾಸಿನಿ, ಆಕೆಯ ಪ್ರಿಯಕರ ಮತ್ತು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.
