ಚಿತ್ರದುರ್ಗ ನಗರದಲ್ಲಿ ನಕಲಿ ಪೊಲೀಸ್ ಹೆಸರಿನಲ್ಲಿ ದರೋಡೆ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ದಿನಾಂಕ 05.04.2026 ರಂದು ಸುಲ್ತಾನಿಪುರ ಗ್ರಾಮದ ಸಲೀಂ ಎ (ತಂದೆ ಅಬ್ದುಲ್ಲಾ) ಅವರು ಚಿತ್ರದುರ್ಗ ನಗರದ ಅಜಾದ್ ಮಿಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಕಪ್ಪು ಬಣ್ಣದ ಟಿವಿಎಸ್ ರೈಡರ್ ಬೈಕ್ (ಕೆಎ-09-ಕೆಎ-1181)ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, “ನಾನು ಪೊಲೀಸ್, ಸ್ಟೇಷನ್‌ಗೆ ಹೋಗೋಣ” ಎಂದು ಬೆದರಿಕೆ ಹಾಕಿ ಸಲೀಂ ಅವರನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡಿದ್ದಾನೆ.

ನಂತರ ಅವರನ್ನು ನಗರದ ಎಪಿಎಂಸಿ ಮಾರ್ಕೆಟ್ ಒಳಗೆ ಕರೆದುಕೊಂಡು ಹೋಗಿ ಬೈಕ್ ನಿಲ್ಲಿಸಿ, ಕಪಾಳಕ್ಕೆ ಹೊಡೆದು ಬೆದರಿಸಿ, ಜೇಬಿನಲ್ಲಿದ್ದ ವಿವೋ ಕಂಪನಿಯ ಮೊಬೈಲ್ ಫೋನ್ ಹಾಗೂ ₹8,700 ನಗದು ಹಣವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಮೊ.ನಂ: 75/2026 ಪ್ರಕರಣವನ್ನು ಬಿ.ಎನ್.ಎಸ್-2023ರ ಕಲಂ 309(4) ಅಡಿ 11.04.2026 ರಂದು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.

ಆರೋಪಿಯನ್ನು ಪತ್ತೆಹಚ್ಚಲು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು (ಐಪಿಎಸ್) ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಡಿ.ವೈ.ಎಸ್.ಪಿ ಅರುಣ್ ನಾಗೇಗೌಡ ಅವರ ಉಸ್ತುವಾರಿಯಲ್ಲಿ, ಕೋಟೆ ಪೊಲೀಸ್ ಠಾಣೆಯ ಪಿ.ಐ ಪ್ರಕಾಶಗೌಡ ಪಾಟೀಲ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ತನಿಖೆ ಮುಂದುವರಿಸಿದ ಪೊಲೀಸರಿಗೆ 11.04.2026 ರಂದು ಚಿತ್ರದುರ್ಗ ನಗರದ ಜೆಎಂಐಟಿ ಸರ್ಕಲ್ ಬಳಿ ಬಿಗ್ ಬಾಸ್ ಹೋಟೆಲ್ ಹತ್ತಿರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸು ಸಿಕ್ಕಿದೆ. ಬಂಧಿತನನ್ನು ಚಿತ್ರದುರ್ಗ ನಗರದ ಐಯುಡಿಪಿ ಲೇಔಟ್ ನಿವಾಸಿ ರಮೇಶ್ (ತಂದೆ ರಂಗಸ್ವಾಮಿ) ಎಂದು ಗುರುತಿಸಲಾಗಿದೆ.

ಬಂಧನದ ವೇಳೆ ಆರೋಪಿಯ ಬಳಿಯಿಂದ ದೂರುದಾರನ ಮೊಬೈಲ್ ಫೋನ್ ಸೇರಿದಂತೆ ಇನ್ನೂ 4 ಮೊಬೈಲ್‌ಗಳು, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಹಾಗೂ “ಕ್ರೈಂ ಸ್ಟೋರಿ ನ್ಯೂಸ್ 24×7” ಮತ್ತು “ಕರ್ನಾಟಕ ಪತ್ರಿಕಾ ಶಕ್ತಿ ಕೇಂದ್ರ” ಎಂಬ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ನಂತರ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Related News

error: Content is protected !!