ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮೇಡ್ಲೇರಿ ಹೋಬಳಿಯ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ಜನರಿಗೆ ಸಂಕಷ್ಟದ ಕಾರಣವಾಗಿದೆ. ಈಗಾಗಲೇ ಇದ್ದ ರಸ್ತೆ ಕಿತ್ತು ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾದ ಅಧಿಕಾರಿಗಳು, ಕಲ್ಲಿನ ಪುಡಿ ಹಾಸಿ ಕೆಲಸವನ್ನು ಅರ್ಧದಲ್ಲೇ ಬಿಟ್ಟುಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಒಂದು ತಿಂಗಳಿನಿಂದ ಕಾಮಗಾರಿ ಆರಂಭವಾದರೂ, ಇದುವರೆಗೆ ಪೂರ್ಣಗೊಳ್ಳದೇ ವಾಹನ ಸವಾರರು ಹಾಗೂ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಮೇಲೆ ಹಾಸಿರುವ ಕಲ್ಲಿನ ಪುಡಿಗೆ ನೀರು ಎರಚದೇ ಇರುವುದರಿಂದ ಭಾರೀ ಪ್ರಮಾಣದಲ್ಲಿ ಧೂಳು ಏಳುತ್ತಿದ್ದು, ಎದುರು ಬರುವ ವಾಹನಗಳು ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರಿಂದ ಅಪಘಾತಗಳ ಭೀತಿ ಹೆಚ್ಚಾಗಿದ್ದು, ಸ್ವಲ್ಪ ಯಾಮಾರಿದರೆ ಪ್ರಾಣಾಪಾಯವಾಗುವಂತಹ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ದಿನನಿತ್ಯ ಸಂಚಾರ ಮಾಡುವ ಜನರು ಧೂಳಿನಿಂದ ಉಸಿರಾಟದ ಸಮಸ್ಯೆಗೂ ಒಳಗಾಗುತ್ತಿದ್ದಾರೆ.

ಸ್ಥಳೀಯರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಹಳೆಯ ರಸ್ತೆಯನ್ನು ಕಿತ್ತು ಹಾಕಿದ ಮೇಲೆ ಕನಿಷ್ಠ ಧೂಳು ನಿಯಂತ್ರಣಕ್ಕಾಗಿ ನೀರು ಎರಚುವ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಇದಕ್ಕೂ ಯಾವುದೇ ಗಮನ ಕೊಡದೇ ಜನರ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.

ತಕ್ಷಣವೇ ಕಾಮಗಾರಿ ಪೂರ್ಣಗೊಳಿಸುವುದರ ಜೊತೆಗೆ, ರಸ್ತೆ ಮೇಲೆ ನೀರು ಎರಚಿ ಧೂಳು ನಿಯಂತ್ರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇರುವುದಾಗಿ ಎಚ್ಚರಿಸಿದ್ದಾರೆ.

Related News

error: Content is protected !!