ಬಳ್ಳಾರಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಯಲ್ಲಿ ನಡೆದಿದೆ ಎನ್ನಲಾದ 16 ಕೋಟಿಗೂ ಅಧಿಕ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಎಪಿಎಂಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಯನ್ನು ಸಂತೋಷ್ ಕುಮಾರ್ (33) ಎಂದು ಗುರುತಿಸಲಾಗಿದೆ. 2022ರಿಂದ 2026ರ ಮಾರ್ಚ್ ವರೆಗೆ, ಅಂದರೆ ಮೂವರು ಕಾರ್ಯಪಾಲಕ ಅಭಿಯಂತರರ ಅವಧಿಯಲ್ಲಿ ಈ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕೆಐಎಡಿಬಿ ಬಳ್ಳಾರಿ ವಲಯ ಕಚೇರಿಯ ಗುತ್ತಿಗೆ ಹಾಗೂ ಖಾಯಂ ನೌಕರರು, ಜೊತೆಗೆ ಬ್ಯಾಂಕ್ ಸಿಬ್ಬಂದಿ ಸೇರಿಕೊಂಡು ನಕಲಿ ಸಹಿಗಳನ್ನು ಬಳಸಿ ಮಂಡಳಿಯ ಖಾತೆಯಿಂದ ಸುಮಾರು 16.17 ಕೋಟಿ ರೂಪಾಯಿಯನ್ನು ಸಂಬಂಧವಿಲ್ಲದ ಖಾತೆಗಳಿಗೆ ವರ್ಗಾವಣೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಈ ಸಂಬಂಧ ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಮಾರ್ಚ್ 19ರಂದು ಅಪರಾಧ ಸಂಖ್ಯೆ 65/2026 ಅಡಿಯಲ್ಲಿ ಬಿಎನ್ಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಎಪಿಎಂಸಿ ಠಾಣೆ ಪೊಲೀಸರು ಮುಂದುವರೆಸುತ್ತಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿ ಸಂತೋಷ್ ಕುಮಾರ್ನನ್ನು ಪೊಲೀಸರು ಇದೀಗ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎಪಿಎಂಸಿ ಪೊಲೀಸ್ ಇನ್ಸ್ಪೆಕ್ಟರ್ ಮಹಮ್ಮದ್ ರಫಿ ಅವರ ನೇತೃತ್ವದಲ್ಲಿ ಎಎಸ್ಐಗಳಾದ ಕೃಷ್ಣ, ಆನಂದ್ ರೆಡ್ಡಿ ಹಾಗೂ ಸಿಬ್ಬಂದಿ ವರ್ಗದವರಾದ ಅದ್ದಿಗೇರಿ ಗೋರಂಟಿ, ಬಸವರಾಜ, ಕುರುಬರ ಕೋನಪ್ಪ, ದೀಪೇಂದ್ರ ಪಾಟಿಲ್ ಮತ್ತು ಮಹೇಶ್ವರಗೌಡ ಅವರ ತಂಡ ಕಾರ್ಯಾಚರಣೆ ನಡೆಸಿದೆ.
ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
