ರಾಮನಗರ ಜಿಲ್ಲೆಯ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಜ್ಯೋತಿಷಿಯೊಬ್ಬ ಮಹಿಳೆಗೆ ಅಸಭ್ಯವಾಗಿ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ವಿಶೇಷ ಪೂಜೆಯ ಹೆಸರಿನಲ್ಲಿ ಮಹಿಳೆಯ ಬೆತ್ತಲೆ ಫೋಟೋಗಳನ್ನು ಕೇಳಿ, ಹಣದ ಆಮಿಷ ನೀಡಿದ ಆರೋಪ ಕೇಳಿಬಂದಿದೆ.
ಗ್ರಾಮದ ಕಿರಣ್ ಎಂಬಾತ, ಮನಿ ಡಬ್ಲಿಂಗ್ ಪೂಜೆ ಮಾಡಿಸುವುದಾಗಿ ಹೇಳಿ ಮಹಿಳೆಯನ್ನು ಸಂಪರ್ಕಿಸಿದ್ದಾನೆ. ಈ ಪೂಜೆಗೆ ಆಯ್ಕೆ ಆಗಬೇಕಾದರೆ “ದೇಹದ ಮೇಲೆ ಮಚ್ಚೆ ಇಲ್ಲದ ಮಹಿಳೆ ನಗ್ನವಾಗಿ ಕುಳಿತುಕೊಳ್ಳಬೇಕು” ಎಂದು ಹೇಳಿ, ತನ್ನ ಆಯ್ಕೆಗಾಗಿ ಮೊದಲು ಬೆತ್ತಲೆ ಫೋಟೋ ಕಳುಹಿಸುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಪೂಜೆ ಯಶಸ್ವಿಯಾಗಿ ಮುಗಿದ ಬಳಿಕ ₹30 ಲಕ್ಷ ಹಣ ನೀಡುವುದಾಗಿ ಆಮಿಷವನ್ನೂ ನೀಡಿದ್ದಾನೆ. ಕಳೆದ ಒಂದು ವಾರದಿಂದ ನಿರಂತರವಾಗಿ ರಾತ್ರಿ ವೇಳೆ ಸಂದೇಶಗಳನ್ನು ಕಳುಹಿಸಿ ಮಹಿಳೆಯನ್ನು ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಹಿಳೆ ಎರಡು ದಿನಗಳ ಹಿಂದೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರೂ, ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿಯ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
