ನವದೆಹಲಿ: ಇತ್ತೀಚೆಗಷ್ಟೇ ವಿವಾಹವಾಗಿ ಹನಿಮೂನ್‌ಗಾಗಿ ಉತ್ತರಾಖಂಡಕ್ಕೆ ತೆರಳಿದ್ದ ದೆಹಲಿ ಮೂಲದ ಯುವ ಮಹಿಳಾ ಟೆಕ್ಕಿಯೊಬ್ಬರು ಮಸೂರಿಯ ಹೋಂಸ್ಟೇ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ದೇಶದಾದ್ಯಂತ ಸಂಚಲನ ಮೂಡಿಸಿದೆ.

ಮೃತರನ್ನು 27 ವರ್ಷದ ಪಿ. ರಾಧಾ ಗಾಯತ್ರಿ ಎಂದು ಗುರುತಿಸಲಾಗಿದ್ದು, ಅವರು ಗುರುಗ್ರಾಮದ ಖಾಸಗಿ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ದೆಹಲಿಯ ಕಿದ್ವಾಯಿ ನಗರ ಪೂರ್ವ ಪ್ರದೇಶದಲ್ಲಿ ವಾಸಿಸುತ್ತಿದ್ದ ಅವರು, ಪತಿ ಸೌಮ್ಯ ಶ್ರೀಚರಣ್ ಅವರೊಂದಿಗೆ ಹನಿಮೂನ್ ಪ್ರವಾಸದಲ್ಲಿದ್ದರು.

ಪೊಲೀಸರ ಮಾಹಿತಿ ಪ್ರಕಾರ, ದಂಪತಿ ಜೂನ್ 13ರಂದು ದೆಹಲಿಯಿಂದ ಋಷಿಕೇಶ್‌ಗೆ ಪ್ರಯಾಣ ಬೆಳೆಸಿದ್ದು, ಜೂನ್ 14ರ ತಡರಾತ್ರಿ ಮಸೂರಿಯ ಟಿಪ್ರಿಧಾರ್ ಪ್ರದೇಶದಲ್ಲಿರುವ ಕಿಯಾನಾ ಹೋಂಸ್ಟೇಗೆ ಆಗಮಿಸಿದ್ದರು. ರಾತ್ರಿ ಸುಮಾರು 11.30ರ ವೇಳೆಗೆ ಅವರು ‘ಬ್ಲಿಸ್’ ಹೆಸರಿನ ಕೊಠಡಿಯಲ್ಲಿ ತಂಗಿದ್ದರು.

ಮರುದಿನ ಬೆಳಿಗ್ಗೆ ಎದ್ದ ಪತಿ, ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮಹಿಳೆಯ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದು, ಕೊಠಡಿಯಲ್ಲಿ ರಕ್ತ ಹಾಗೂ ಮೂತ್ರದ ಗುರುತುಗಳು ಕಂಡುಬಂದಿದ್ದವು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಮಾಹಿತಿ ಪಡೆದ ಮಸೂರಿ ಪೊಲೀಸರು 108 ಆಂಬುಲೆನ್ಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ವೈದ್ಯಕೀಯ ಸಿಬ್ಬಂದಿ ಮಹಿಳೆಯನ್ನು ಪರೀಕ್ಷಿಸಿದಾಗ ಆಕೆ ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ.

ಪೊಲೀಸರ ಪ್ರಾಥಮಿಕ ಪರಿಶೀಲನೆಯಲ್ಲಿ ಮೃತದೇಹ ಬಟ್ಟೆ ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಾಸಿಗೆಯ ಮೇಲೂ ರಕ್ತದ ಕಲೆಗಳು ಕಂಡುಬಂದಿವೆ. ಕೊಠಡಿಯಿಂದ ಎರಡು ಖಾಲಿ ಮದ್ಯದ ಬಾಟಲಿಗಳು ಹಾಗೂ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತದೇಹವನ್ನು ಡೆಹ್ರಾಡೂನ್‌ನ ಕೊರೊನೇಷನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವೈದ್ಯರ ತಂಡದಿಂದ ಪರೀಕ್ಷೆ ನಡೆಸಿ ಅದರ ವಿಡಿಯೊ ದಾಖಲಾತಿ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ವರದಿ ಬಂದ ಬಳಿಕ ಸಾವಿನ ನಿಜವಾದ ಕಾರಣ ಬೆಳಕಿಗೆ ಬರುವ ನಿರೀಕ್ಷೆಯಿದೆ.

ಗಾಯತ್ರಿ ಮತ್ತು ಸೌಮ್ಯ ಶ್ರೀಚರಣ್ ಅವರು 2025ರ ನವೆಂಬರ್ 8ರಂದು ವಿವಾಹವಾಗಿದ್ದರು. ಇಬ್ಬರೂ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿಗಳಾಗಿದ್ದಾರೆ.

ಸದ್ಯ ಈ ನಿಗೂಢ ಸಾವಿನ ಪ್ರಕರಣದ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!