
ನಂಜನಗೂಡು ತಾಲೂಕಿನ ಗಣೇಶಪುರ ಗ್ರಾಮದ ಬಳಿ ದಾರುಣ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನದ ಟೈರ್ ಬ್ಲಾಸ್ಟ್ ಆಗಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ.
ಮಡುವಿನಹಳ್ಳಿ ಗ್ರಾಮದ ಮಹದೇವಸ್ವಾಮಿ ಮತ್ತು ಚಂದ್ರಮ್ಮ ದಂಪತಿಯ ಪುತ್ರಿ ಪೂರ್ವಿಕ (16) ಮೃತ ಬಾಲಕಿಯಾಗಿದ್ದಾಳೆ. ಆಕೆ ಇತ್ತೀಚೆಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದು, ತಗಡೂರು ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಳು.
ಬಸವ ಜಯಂತಿ ಪ್ರಯುಕ್ತ ಕುಟುಂಬದ ನಾಲ್ವರು ಒಂದೇ ಬೈಕ್ನಲ್ಲಿ ಸರಗೂರು ತಾಲೂಕಿನ ಪ್ರಸಿದ್ಧ ಶ್ರೀ ಬೇಲದ ಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮರಳುತ್ತಿದ್ದರು. ಈ ವೇಳೆ ಯಡಿಯಾಲ ಸಮೀಪ ಗಣೇಶಪುರ ಗ್ರಾಮದ ಮುಖ್ಯರಸ್ತೆಯಲ್ಲಿ ಬೈಕ್ನ ಟೈರ್ ಬ್ಲಾಸ್ಟ್ ಆಗಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪೂರ್ವಿಕ ಹಾಗೂ ತಾಯಿ ಚಂದ್ರಮ್ಮ ಅವರನ್ನು ತಕ್ಷಣ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪೂರ್ವಿಕ ಮೃತಪಟ್ಟಿದ್ದಾಳೆ. ತಾಯಿ ಚಂದ್ರಮ್ಮ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಂದೆ ಮಹದೇವಸ್ವಾಮಿ ಮತ್ತು ಸಹೋದರ ಪ್ರೀತಮ್ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೃತದೇಹವನ್ನು ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಯಡಿಯಾಲ ಪೊಲೀಸರು ತಿಳಿಸಿದ್ದಾರೆ.






