ಬೆಂಗಳೂರು ನಗರವನ್ನು ಬೆಚ್ಚಿಬೀಳಿಸುವಂತ ದಾರುಣ ಘಟನೆ ಪೂರ್ವ ಭಾಗದ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಲಿವ್-ಇನ್ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾರಣಕ್ಕೆ ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ತಂದೆ-ತಾಯಿ ಹಾಗೂ ತಂಗಿಯನ್ನೇ ಕೊಲೆ ಮಾಡಿದ ಆರೋಪ ಕೇಳಿಬಂದಿದೆ.

ಹತ್ಯೆಗೀಡಾದವರನ್ನು ಸೋಮಸುಂದರ್ (55), ಅವರ ಪತ್ನಿ ಮುತ್ತುಲಕ್ಷ್ಮಿ (48) ಮತ್ತು ಕಿರಿಯ ಪುತ್ರಿ ಸುಪ್ರಿಯಾ (20) ಎಂದು ಗುರುತಿಸಲಾಗಿದೆ. ಇವರ ಮೃತದೇಹಗಳು ಸೀಗೇಹಳ್ಳಿಯ ಧಾರ್ಮಿಕ ಲೇಔಟ್‌ನ ‘ಸಾಯಿ ಗ್ರೀನ್ ಅಪಾರ್ಟ್‌ಮೆಂಟ್’‌ನ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿವೆ.

ಮಾಹಿತಿಯ ಪ್ರಕಾರ, ದಂಪತಿಯ ಹಿರಿಯ ಪುತ್ರಿ ಶ್ವೇತಾ ತನ್ನ ಪ್ರಿಯಕರ ಕೆನ್ನೆತ್ ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು. ಸುಮಾರು ಒಂದೂವರೆ ತಿಂಗಳ ಹಿಂದೆ ಇಬ್ಬರೂ ಬಾಡಿಗೆ ಫ್ಲ್ಯಾಟ್ ಪಡೆದು ಒಟ್ಟಿಗೆ ವಾಸ ಆರಂಭಿಸಿದ್ದರು. ಆದರೆ ಈ ಸಂಬಂಧಕ್ಕೆ ಶ್ವೇತಾ ಅವರ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸುತ್ತಿತ್ತು ಎನ್ನಲಾಗಿದೆ.

ಜೂನ್ 22ರ ಸಂಜೆ ಸುಮಾರು 7 ಗಂಟೆ ವೇಳೆಗೆ ಶ್ವೇತಾ ಅವರ ತಂದೆ-ತಾಯಿ ಹಾಗೂ ತಂಗಿ, ಆಕೆ ವಾಸಿಸುತ್ತಿದ್ದ ಫ್ಲ್ಯಾಟ್‌ಗೆ ತೆರಳಿದ್ದರು. ಈ ವೇಳೆ ಸಂಬಂಧದ ವಿಚಾರವಾಗಿ ಮತ್ತೆ ಮಾತಿನ ಚಕಮಕಿ ನಡೆದಿದ್ದು, ವಾಗ್ವಾದ ತೀವ್ರ ಸ್ವರೂಪ ಪಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕೋಪದ ಭರದಲ್ಲಿ ಶ್ವೇತಾ ಮತ್ತು ಕೆನ್ನೆತ್ ಸೇರಿ ಮೂವರ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಘಟನೆಯ ಬಗ್ಗೆ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಕೆ.ಆರ್.ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಘಟನೆಯ ನಿಖರ ಕಾರಣಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಕುಟುಂಬ ಸಂಬಂಧಗಳು ಎಷ್ಟು ಹದಗೆಟ್ಟಿವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಕಹಿ ಉದಾಹರಣೆಯಾಗಿದ್ದು, ಪ್ರೀತಿಯ ಮೋಹದಲ್ಲಿ ಯುವತಿ ತನ್ನದೇ ಕುಟುಂಬದವರ ವಿರುದ್ಧ ಕ್ರೂರ ಕೃತ್ಯ ಎಸಗಿದ್ದಾಳೆ ಎಂಬ ಆರೋಪ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

Related News

error: Content is protected !!