
ಗ್ರಾಮ ಪಂಚಾಯಿತಿ ಠರಾವು ಪಾಸಾದರೂ ಆದೇಶ ಪತ್ರ ನೀಡದ ಅಧಿಕಾರಿಗಳು; ತಾಲೂಕು–ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರದತ್ತ ರಮಜಾನ್ ಮುಲ್ಲಾ ಮೊರೆ
ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ಖಾಯಂ ಆಗಿ ವಾಸವಾಗಿರುವ ಮಂಗಳಮುಖಿ (ತೃತೀಯ ಲಿಂಗಿ) ರಮಜಾನ್ ದಾದು ಮುಲ್ಲಾ ಅವರು ವಾಸಿಸಲು ಖುಲ್ಲಾ ಜಾಗ ಹಾಗೂ ಮನೆ ಮಂಜೂರು ಮಾಡುವಂತೆ ಕೋರಿ ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದರೂ, ಇದುವರೆಗೆ ಯಾವುದೇ ಸ್ಪಷ್ಟ ನ್ಯಾಯ ದೊರೆತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ತಮಗೆ ವಾಸಿಸಲು ಜಾಗ ಹಾಗೂ ಮನೆ ಕಲ್ಪಿಸುವಂತೆ ರಮಜಾನ್ ಮುಲ್ಲಾ ಅವರು ಮದಭಾವಿ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲೂಕು ಪಂಚಾಯಿತಿ, ತಹಶೀಲ್ದಾರ್ ಕಚೇರಿ, ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಮನವಿಗಳ ಸರಣಿ ಮುಂದುವರಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂಬುದು ಅವರ ಆರೋಪವಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸ್; ಆದೇಶ ಪತ್ರ ಮಾತ್ರ ಇಲ್ಲ!
ರಮಜಾನ್ ಮುಲ್ಲಾ ಅವರ ವಾಸದ ಸಮಸ್ಯೆಗೆ ಸಂಬಂಧಿಸಿದಂತೆ ಮದಭಾವಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ಈ ಹಿಂದೆ ಸರ್ವಾನುಮತದಿಂದ ಠರಾವು ಕೂಡ ಪಾಸಾಗಿದೆ ಎನ್ನಲಾಗಿದೆ.
ಆದರೆ ಠರಾವು ಪಾಸಾಗಿ ವರ್ಷಗಳೇ ಕಳೆದರೂ, ಇದುವರೆಗೆ ಅಧಿಕೃತ ಆದೇಶ ಪತ್ರ ಅಥವಾ ಹಕ್ಕುಪತ್ರ ನೀಡಿಲ್ಲ. “ಈಗ ಕೊಡುತ್ತೇವೆ, ನಾಳೆ ಕೊಡುತ್ತೇವೆ” ಎಂದು ಅಧಿಕಾರಿಗಳು ಬಾಯಿಮಾತಿನ ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ರಮಜಾನ್ ಮುಲ್ಲಾ ಆರೋಪಿಸಿದ್ದಾರೆ.
9 ವರ್ಷಗಳ ಅಲೆದಾಟಕ್ಕೆ ಕೊನೆ ಯಾವಾಗ?
ವಾಸಿಸಲು ಸ್ವಂತ ಜಾಗವೂ ಇಲ್ಲ, ಮನೆ ಕೂಡ ಇಲ್ಲದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಅತಂತ್ರ ಜೀವನ ನಡೆಸಬೇಕಾಗಿದೆ ಎಂದು ರಮಜಾನ್ ಮುಲ್ಲಾ ಕಣ್ಣೀರಿಟ್ಟಿದ್ದಾರೆ.
ಸರ್ಕಾರದ ವಿವಿಧ ಯೋಜನೆಗಳ ಮೂಲಕ ತೃತೀಯ ಲಿಂಗಿಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ, ಅವು ತಳಮಟ್ಟದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬ ಪ್ರಶ್ನೆಯನ್ನು ಈ ಪ್ರಕರಣ ಹುಟ್ಟುಹಾಕಿದೆ.
ಸಮಾಜದ ಮುಖ್ಯವಾಹಿನಿಗೆ ಬರಲು ಹೋರಾಡುತ್ತಿರುವ ತೃತೀಯ ಲಿಂಗಿ ಸಮುದಾಯದ ವ್ಯಕ್ತಿಯೊಬ್ಬರು ಮೂಲಭೂತ ವಸತಿ ಸೌಲಭ್ಯಕ್ಕಾಗಿ ಬರೋಬ್ಬರಿ 9 ವರ್ಷಗಳಿಂದ ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡಬೇಕಾದ ಪರಿಸ್ಥಿತಿ ನಿಜಕ್ಕೂ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮೂಡಿಸಿದೆ.
ತಾಲೂಕಿನಿಂದ ಕೇಂದ್ರದವರೆಗೆ ಮನವಿ: ಇನ್ನಾದರೂ ಸ್ಪಂದಿಸುವರೇ?
ತಾಲೂಕು ಆಡಳಿತ, ಜಿಲ್ಲಾ ಆಡಳಿತ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗಳಿಂದ ಹಿಡಿದು ರಾಜ್ಯ ಸರ್ಕಾರ, ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವರು, ಪ್ರಧಾನಮಂತ್ರಿಗಳವರೆಗೆ ಈ ವಿಷಯದ ಬಗ್ಗೆ ಗಮನಹರಿಸಿ ರಮಜಾನ್ ದಾದು ಮುಲ್ಲಾ ಅವರಿಗೆ ನ್ಯಾಯ ಒದಗಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ತಮಗೆ ವಾಸಿಸಲು ಸೂಕ್ತವಾದ ಖುಲ್ಲಾ ಜಾಗವನ್ನು ಗುರುತಿಸಿ, ಸರ್ಕಾರದ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿ, ಕೂಡಲೇ ಅಧಿಕೃತ ಆದೇಶ ಪತ್ರ ನೀಡಬೇಕು ಎಂದು ರಮಜಾನ್ ಮುಲ್ಲಾ ಆಗ್ರಹಿಸಿದ್ದಾರೆ.
ಒಂಬತ್ತು ವರ್ಷಗಳಿಂದ ನಡೆಯುತ್ತಿರುವ ಈ ಅಲೆದಾಟಕ್ಕೆ ಇನ್ನಾದರೂ ತೆರೆ ಬೀಳುತ್ತದೆಯೇ? ಗ್ರಾಮ ಪಂಚಾಯಿತಿ ಠರಾವಿಗೆ ಅಧಿಕೃತ ಆದೇಶದ ರೂಪ ಸಿಗುತ್ತದೆಯೇ? ರಮಜಾನ್ ದಾದು ಮುಲ್ಲಾ ಅವರಿಗೆ ವಾಸಿಸಲು ಜಾಗ ಮತ್ತು ಮನೆ ಮಂಜೂರಾಗುತ್ತದೆಯೇ? ಅಥವಾ ಈ ಹಿಂದೆ ನೀಡಿದ ಭರವಸೆಗಳಂತೆಯೇ ಯಥಾಸ್ಥಿತಿ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಮಜಾನ್ ಮುಲ್ಲಾ ಎಚ್ಚರಿಕೆ ನೀಡಿದ್ದಾರೆ.






