ಬೆಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಪ್ರೀತಿಗೆ ತಿರುಗಿದ್ದ ಸಂಬಂಧವು ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವಕನೊಬ್ಬ ತನ್ನ ಸಂಗಾತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ.

ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಶರತ್ ಹಾಗೂ ಅನುಷಾ ಎಂಬುವವರಿಗೆ ಸುಮಾರು ಆರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರೂ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಶರತ್ ವಾಟರ್ ಟ್ಯಾಂಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೊಠಡಿಯಲ್ಲೇ ಇಬ್ಬರೂ ನೆಲೆಸಿದ್ದರು.

ಅನುಷಾಗೆ ತಂದೆ-ತಾಯಿ ಇರಲಿಲ್ಲ. ಆಕೆಗೆ ಒಬ್ಬ ಅಕ್ಕ ಮಾತ್ರ ಇದ್ದರು ಎನ್ನಲಾಗಿದೆ. ಶರತ್ ಕೆಲಸಕ್ಕೆ ತೆರಳಿದ ವೇಳೆ ಅನುಷಾ ಮನೆಯಲ್ಲೇ ಇರುತ್ತಿದ್ದಳು. ಆದರೆ ಮನೆ ಕೆಲಸಗಳಲ್ಲಿ ಆಸಕ್ತಿ ತೋರದಿರುವುದು, ಆಗಾಗ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವುದು ಹಾಗೂ ಕೆಲ ಯುವಕರೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿರುವ ವಿಚಾರಗಳಿಗೆ ಸಂಬಂಧಿಸಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ಉಂಟಾದ ಗಲಾಟೆಯ ಬಳಿಕ ಅನುಷಾ ಮನೆ ಬಿಟ್ಟು ತೆರಳಿದ್ದಳು. ಬಳಿಕ ಶರತ್ ಸಕಲೇಶಪುರಕ್ಕೆ ತೆರಳಿ ಆಕೆಯನ್ನು ಮರಳಿ ಬೆಂಗಳೂರಿಗೆ ಕರೆತಂದಿದ್ದನು. ಆದರೆ ಶನಿವಾರ ರಾತ್ರಿ ಮತ್ತೆ ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಜಗಳ ತಾರಕಕ್ಕೇರಿದ ವೇಳೆ ಆಕ್ರೋಶಗೊಂಡ ಶರತ್, ಅನುಷಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಯಾರಿಗೂ ಅನುಮಾನ ಬರದಂತೆ ಕೊಠಡಿಗೆ ಬೀಗ ಹಾಕಿ, ಕೀಲಿಕೈಯನ್ನು ಕಿಟಕಿ ಬಳಿ ಇಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆ ಬೆಳಕಿಗೆ ಬಂದಿದ್ದು ಕೂಡ ವಿಚಿತ್ರ ರೀತಿಯಲ್ಲಿ. ಆರೋಪಿ ಶರತ್ ತಾನೇ ಒಬ್ಬ ವಕೀಲರಿಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ತಕ್ಷಣ ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಕಿಟಕಿ ಬಳಿ ಇದ್ದ ಕೀಲಿಯಿಂದ ಬಾಗಿಲು ತೆರೆದು ಪರಿಶೀಲಿಸಿದಾಗ ಅನುಷಾಳ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶರತ್‌ನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related News

error: Content is protected !!