ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ ಸರ್ಕಾರಿ ಅಭಿಯೋಜಕರಿಗೆ ಲಂಚ ನೀಡಲು ಯತ್ನಿಸಿದ ತಂದೆ-ಮಗನನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಹಿರಿಯ ಕಾನೂನು ಅಧಿಕಾರಿ ಹಾಗೂ ಸರ್ಕಾರಿ ಅಭಿಯೋಜಕರಾದ ಪ್ರಾಣೇಶ ಸಿದ್ದಪ್ಪ ಭರತನೂರ ಅವರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎಸ್‌ಸಿ/ಎಸ್‌ಟಿ ಪ್ರಕರಣವೊಂದು ಕಲಬುರಗಿಯ 2ನೇ ಅಪರ ಜಿಲ್ಲಾ ಮತ್ತು ಸತ್ರ (ಎಸ್‌ಸಿ/ಎಸ್‌ಟಿ) ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಪ್ರಕರಣವನ್ನು ಮುಂದೂಡಿಕೆ ಮಾಡಿಸಲು ಹಾಗೂ ಸಹಕಾರ ನೀಡುವಂತೆ ಒತ್ತಡ ಹೇರಲು ಆರೋಪಿತನ ಪರವಾಗಿ ಆತನ ಅಣ್ಣ ಸಂಜೀವನ್ ದತ್ತಾಜಿ ಪಾಟೀಲ್ (80) ಮತ್ತು ಪುತ್ರ ಸುರೇಶ್ ಸಂಜೀವನ್ ಪಾಟೀಲ್ (44) ಅವರು ಸರ್ಕಾರಿ ಅಭಿಯೋಜಕರಿಗೆ 5,000 ರೂಪಾಯಿ ನಗದು ಹಣವನ್ನು ಕವರಿನಲ್ಲಿ ಇಟ್ಟು ನೀಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಲಂಚದ ಹಣ ಹಸ್ತಾಂತರಿಸುವ ವೇಳೆ ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.

ಈ ಕಾರ್ಯಾಚರಣೆಯ ನೇತೃತ್ವವನ್ನು ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ರಾಜಶೇಖರ ಬಡದೇಸಾರ ವಹಿಸಿಕೊಂಡಿದ್ದು, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಅರುಣ್ ಕುಮಾರ್ ಹಾಗೂ ರವಿ ಪವಾರ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಕರಣದ ತನಿಖೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

Related News

error: Content is protected !!