ಹೊನ್ನಾವರ: ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿಯುವಂತೆ ತಮ್ಮ ಮೇಲೆ ಬೆದರಿಕೆಗಳು, ಒತ್ತಡಗಳು ಹಾಗೂ ಹಣದ ಆಮಿಷಗಳು ಬಂದಿವೆ ಎಂದು ಬಂಗಾರಮಕ್ಕಿ ಶ್ರೀಕ್ಷೇತ್ರದ ಮಾರುತಿ ಗುರೂಜಿ ಆರೋಪಿಸಿದ್ದಾರೆ. ಕೋಟಿ ರೂಪಾಯಿ ನೀಡುವ ಪ್ರಸ್ತಾಪವೂ ಬಂದಿದ್ದರೂ ಅದನ್ನು ತಿರಸ್ಕರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧವಾಗಿ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ಯೋಜನೆಯಿಂದ ಪರಿಸರ ಹಾಗೂ ಸ್ಥಳೀಯರ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಹೋರಾಟಗಾರರು ಮತ್ತು ವಿವಿಧ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಮಾರುತಿ ಗುರೂಜಿ, ಯೋಜನೆಗೆ ತಮ್ಮ ತೀವ್ರ ವಿರೋಧವನ್ನು ಮತ್ತೊಮ್ಮೆ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಹೋರಾಟ ಕೈಬಿಡುವಂತೆ ಬೆದರಿಕೆಗಳು ಬಂದಿದ್ದವು. ನಂತರ ತಮ್ಮ ವಾಹನಕ್ಕೆ ಅಪಘಾತವಾಗುವಂತೆ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಬಳಿಕ ಬೆದರಿಕೆ ಕರೆಗಳು ಬಂದವು ಹಾಗೂ ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸಲಾಗಿದೆ ಎಂದು ಹೇಳಿದರು.

ಕೆಲವು ಅಧಿಕಾರಿಗಳು ತಮ್ಮನ್ನು ಭೇಟಿ ಮಾಡಿ ಯೋಜನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದು, ಇದೇ ವೇಳೆ ಹಣದ ಆಮಿಷವನ್ನೂ ಒಡ್ಡಲಾಗಿದೆ ಎಂದು ಗುರೂಜಿ ಆರೋಪಿಸಿದರು. ಆದರೆ ಯಾವುದೇ ಕಾರಣಕ್ಕೂ ತಮ್ಮ ನಿಲುವು ಬದಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

“ಇಂದು ಕೋಟಿ ರೂಪಾಯಿ ಕೊಟ್ಟರೂ, ನಾಳೆ ಅದಕ್ಕಿಂತ ಹೆಚ್ಚಿನ ಹಣ ನೀಡಿದರೂ ನಾವು ಒಪ್ಪುವುದಿಲ್ಲ. ಹಣಕ್ಕಾಗಿ ನಮ್ಮ ಹೋರಾಟವನ್ನು ಮಾರಿಕೊಳ್ಳುವುದಿಲ್ಲ. ಪ್ರಾಣ ಹೋದರೂ ಶರಾವತಿಯನ್ನು ಉಳಿಸುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ,” ಎಂದು ಮಾರುತಿ ಗುರೂಜಿ ಹೇಳಿದರು.

ಯೋಜನೆ ಪರವಾಗಿರುವ ಕೆಲವರು ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಒಂದೆಡೆ ಬೆದರಿಕೆ ಹಾಗೂ ಮತ್ತೊಂದೆಡೆ ಹಣದ ಆಮಿಷದ ಮೂಲಕ ಹೋರಾಟವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ತಮ್ಮ ಕಾರು ಅಪಘಾತದ ಘಟನೆಯನ್ನು ಉಲ್ಲೇಖಿಸಿದ ಅವರು, “ಭಯ ಹುಟ್ಟಿಸುವ ಹಲವು ಪ್ರಯತ್ನಗಳು ನಡೆದಿವೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಕ್ಕಾಗಿ ಯಾರನ್ನು ನಂಬಬೇಕು ಎಂಬ ಪ್ರಶ್ನೆಯೂ ಎದುರಾಗಿದೆ. ಆದರೂ ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ,” ಎಂದು ತಮ್ಮ ದೃಢ ನಿಲುವು ಪುನರುಚ್ಚರಿಸಿದರು.

Related News

error: Content is protected !!