ಶಿಕ್ಷಣಕ್ಕೆ ಬೆಂಬಲ ನೀಡಿ ಪತ್ನಿಗೆ ಸರ್ಕಾರಿ ಉದ್ಯೋಗ ಸಿಗುವಂತೆ ಮಾಡಿದ ಗಂಡನೊಬ್ಬ, ನಂತರ ಪತ್ನಿಯ ನಿರ್ಲಕ್ಷ್ಯ ಮತ್ತು ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಆಂಧ್ರ ಪ್ರದೇಶದ ಮಂಚೇರಿಯಲ್ ಜಿಲ್ಲೆಯ ರಾಮಕೃಷ್ಣಪುರದಲ್ಲಿ ಮಾರ್ಚ್ 10ರಂದು ಈ ಘಟನೆ ನಡೆದಿದ್ದು, 41 ವರ್ಷದ ನಾಗೆಲ್ಲಿ ಶ್ರೀನಿವಾಸ್ ಮೃತ ವ್ಯಕ್ತಿಯಾಗಿದ್ದಾರೆ. ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಲಕ್ಷ್ಮಿ ನಗರದಲ್ಲಿ ವಾಸವಾಗಿದ್ದರು.

ಈ ಸಂಬಂಧ ಮೃತರ ಸಹೋದರ ಶಿವಕೃಷ್ಣ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, 2012ರಲ್ಲಿ ಶ್ರೀನಿವಾಸ್ ಅವರು ಸತ್ಲಪಲ್ಲಿ ಜ್ಯೋತಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒಬ್ಬ ಪುತ್ರನಿದ್ದಾನೆ.

ಮದುವೆಯ ಬಳಿಕ ಜ್ಯೋತಿ ತಮ್ಮ ಶಿಕ್ಷಣ ಮುಂದುವರಿಸಲು ಶ್ರೀನಿವಾಸ್ ಸಂಪೂರ್ಣ ಬೆಂಬಲ ನೀಡಿದ್ದರು. ನಂತರ ಜ್ಯೋತಿ ಗ್ರೂಪ್-II ಅಡಿಯಲ್ಲಿ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ ಸರ್ಕಾರಿ ಉದ್ಯೋಗ ಸಿಕ್ಕ ಬಳಿಕ ಜ್ಯೋತಿ ಗಂಡನಿಂದ ದೂರವಾಗಲು ಆರಂಭಿಸಿದ್ದು, “ಇನ್ನು ಮುಂದೆ ನನಗೆ ನಿಮ್ಮ ಅಗತ್ಯವಿಲ್ಲ” ಎಂದು ಹೇಳಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಹಿನ್ನೆಲೆ ದಂಪತಿ ಕೆಲವು ಕಾಲ ಪ್ರತ್ಯೇಕವಾಗಿ ವಾಸವಾಗಿದ್ದರು. ಮಗುವಿನ ಜನನದ ನಂತರ ಮತ್ತೆ ಒಟ್ಟಿಗೆ ವಾಸಿಸಲು ಆರಂಭಿಸಿದ್ದರೂ, ಸಂಬಂಧದಲ್ಲಿ ಉದ್ವಿಗ್ನತೆ ಮುಂದುವರಿದಿತ್ತು. ಬಳಿಕ ಲಕ್ಷ್ಮಿ ನಗರದಲ್ಲಿ ಮನೆ ಖರೀದಿಸಲು ಜ್ಯೋತಿ ಒತ್ತಡ ಹಾಕಿದರೆಂದು ಹೇಳಲಾಗಿದೆ. ಇದಕ್ಕಾಗಿ ಶ್ರೀನಿವಾಸ್ ಸುಮಾರು 50 ಲಕ್ಷ ರೂಪಾಯಿ ವೆಚ್ಚ ಮಾಡಿ ಮನೆ ಖರೀದಿಸಿದ್ದರು.

ಮನೆ ಖರೀದಿಯಾದ ಬಳಿಕ ಗೃಹಪ್ರವೇಶ ಕಾರ್ಯಕ್ರಮವನ್ನು ಜ್ಯೋತಿ ತಮ್ಮ ಕುಟುಂಬದವರೊಂದಿಗೆ ಮಾತ್ರ ನಡೆಸಿ, ಗಂಡನ ಕುಟುಂಬದವರನ್ನು ಆಹ್ವಾನಿಸದಿರುವುದು ಮತ್ತಷ್ಟು ಮನಸ್ತಾಪಕ್ಕೆ ಕಾರಣವಾಯಿತು. ನಂತರ ಜ್ಯೋತಿ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಈ ಮಧ್ಯೆ ಶ್ರೀನಿವಾಸ್ ಮನೆ ಮಾಲೀಕತ್ವದ ವಿಚಾರವಾಗಿ ಸಿವಿಲ್ ಪ್ರಕರಣ ದಾಖಲಿಸಿದ್ದರು. ಘಟನೆ ನಡೆದ ದಿನ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಪತ್ನಿ ಹಾಗೂ ಆಕೆಯ ಸಂಬಂಧಿಕರ ಕಿರುಕುಳ ಮತ್ತು ಬೆದರಿಕೆಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರು ಬರೆದಿದ್ದಾರೆ.

ಪೊಲೀಸರು ಡೆತ್‌ನೋಟ್ ವಶಕ್ಕೆ ಪಡೆದು, ಶಿವಕೃಷ್ಣ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!