ವೇಲೂರು: ತಮಿಳುನಾಡಿನ ವೇಲೂರು ಜಿಲ್ಲೆಯಲ್ಲಿ ದಾಂಪತ್ಯ ಕಲಹದ ಅಂತ್ಯ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪತ್ನಿಯೊಂದಿಗೆ ನಡೆದ ತೀವ್ರ ವಾಗ್ವಾದದ ಬಳಿಕ ಆವೇಶಗೊಂಡ ಪತಿಯೊಬ್ಬ ಆಕೆಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಪತ್ನಿ ಕಾಣೆಯಾಗಿದ್ದಾಳೆ ಎಂದು ನಾಟಕವಾಡಿದರೂ, ಮನೆಯಿಂದ ಬರುತ್ತಿದ್ದ ದುರ್ವಾಸನೆಯಿಂದ ಕೊಲೆ ಪ್ರಕರಣ ಬಯಲಾಗಿದೆ. ಈ ಘಟನೆಯಿಂದ ಮೂವರು ಮಕ್ಕಳು ತಾಯಿಯನ್ನು ಕಳೆದುಕೊಂಡು, ತಂದೆ ಜೈಲು ಸೇರಿದ ಕಾರಣ ಅನಾಥರಂತಾಗಿದ್ದಾರೆ.

ಬಂಧಿತನನ್ನು ವಿಜಯ್ ಕುಮಾರ್ (48) ಎಂದು ಗುರುತಿಸಲಾಗಿದ್ದು, ಮೃತ ಮಹಿಳೆ ಧನಲಕ್ಷ್ಮಿ (36) ಆಗಿದ್ದಾರೆ. 18 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಸೇರಿ ಮೂವರು ಮಕ್ಕಳಿದ್ದಾರೆ. ವಿಜಯ್ ಕುಮಾರ್ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರೆ, ಧನಲಕ್ಷ್ಮಿ ಮನೆ ಕೆಲಸದ ಜೊತೆಗೆ ಹೊರಗಡೆಯೂ ಓಡಾಡುತ್ತಿದ್ದಳು. ಈ ನಡುವೆ ಧನಲಕ್ಷ್ಮಿಗೆ ಮತ್ತೊಬ್ಬ ಯುವಕನೊಂದಿಗೆ ಆತ್ಮೀಯ ಸಂಬಂಧವಿದೆ ಎಂಬ ಅನುಮಾನದಿಂದ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆ ನಡೆದ ದಿನವೂ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಬಳಿಕ ರಾತ್ರಿ ಮನೆಗೆ ತಡವಾಗಿ ಬಂದ ಪತ್ನಿಯನ್ನು ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ಮತ್ತಷ್ಟು ಉಲ್ಬಣಗೊಂಡಿದೆ. ಈ ವೇಳೆ ಪತ್ನಿ ಅವಮಾನಕಾರಿ ಮಾತುಗಳನ್ನಾಡಿದ್ದರಿಂದ ಆವೇಶಗೊಂಡ ವಿಜಯ್ ಕುಮಾರ್ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಶವವನ್ನು ಮನೆಯ ಅಡುಗೆಮನೆಯ ಮೇಲಿನ ಅಟ್ಟದಲ್ಲಿ ಅಡಗಿಸಿ, ಮರುದಿನ ಮಕ್ಕಳನ್ನು ಶಾಲೆಗೆ ಕಳುಹಿಸಿ, ಪತ್ನಿ ಕಾಣೆಯಾಗಿದ್ದಾಳೆ ಎಂದು ನೆರೆಹೊರೆಯವರಿಗೆ ಹೇಳಿದ್ದಾನೆ.

ಕೆಲ ದಿನಗಳ ಬಳಿಕ ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ಧನಲಕ್ಷ್ಮಿಯ ಶವ ಪತ್ತೆಯಾಗಿದೆ. ಬಳಿಕ ವಿಜಯ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ದುರಂತದಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆ ಜೈಲು ಸೇರಿದ ಪರಿಣಾಮ ಮೂವರು ಮಕ್ಕಳು ಸಂಕಷ್ಟದ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದು, ಘಟನೆ ಸ್ಥಳೀಯರಲ್ಲಿ ತೀವ್ರ ನೋವು ಮೂಡಿಸಿದೆ.

Related News

error: Content is protected !!