ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬ್ಯಾಡರಹಳ್ಳಿ ಮೂಲದ ರವಿ ಕುಟುಂಬಕ್ಕೆ ಮುತ್ತತ್ತಿ ಪ್ರವಾಸವೇ ಅಂತಿಮ ಯಾತ್ರೆಯಾಯಿತು. ದೇವರ ದರ್ಶನಕ್ಕಾಗಿ ಕುಟುಂಬ ಸಮೇತ ಹೊರಟಿದ್ದ ಐವರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮನಕಲುಕುವಂತಿದೆ.
ತರಕಾರಿ ವ್ಯಾಪಾರ ಮಾಡಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದ ರವಿ ಕುಟುಂಬ, ಬಾಡಿಗೆ ಕಾರಿನಲ್ಲಿ ದೇವರ ದರ್ಶನಕ್ಕೆ ತೆರಳಿತ್ತು. ಮೊದಲು ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿದ ಕುಟುಂಬ, ಬಳಿಕ ಸಂಜೆ ವೇಳೆಗೆ ಮುತ್ತತ್ತಿಗೆ ಆಗಮಿಸಿತು. ಸಂಜೆ ಸುಮಾರು 4:45ರ ವೇಳೆಗೆ ಮುತ್ತತ್ತಿಯ ಆಂಜನೇಯಸ್ವಾಮಿ ದೇವರ ದರ್ಶನ ಮುಗಿಸಿ, ಕಾವೇರಿ ನದಿಯ ತೀರಕ್ಕೆ ತೆರಳಿದ್ದರು.
ಅಲ್ಲಿ ಕರ್ತವ್ಯದಲ್ಲಿದ್ದ ಹೋಮ್ ಗಾರ್ಡ್ ಸಿಬ್ಬಂದಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ, ನೀರಿನ ಪ್ರಮಾಣ ಕಡಿಮೆ ಇದೆ ಎಂದು ಭಾವಿಸಿ ಫೋಟೋ ತೆಗೆಯಲು ಕುಟುಂಬದವರು ನದಿಗೆ ಇಳಿದಿದ್ದಾರೆ. ಇದೇ ವೇಳೆ ವಿಜಯಮ್ಮ ಅವರು ನೀರಿನಲ್ಲಿ ಜಾರಿ ಮುಳುಗಲಾರಂಭಿಸಿದರು. ಅವರನ್ನು ರಕ್ಷಿಸಲು ಹೋಗಿದ್ದ ಮತ್ತಿತರರು ಕೂಡ ನೀರಿನ ಹೊಳೆಯ ಸೆಳೆತಕ್ಕೆ ಸಿಲುಕಿ ಒಬ್ಬರ ಹಿಂದೆ ಒಬ್ಬರು ಮುಳುಗಿದ್ದಾರೆ.
ಘಟನೆಯಲ್ಲಿ 50 ವರ್ಷದ ವಿಜಯಮ್ಮ, 28 ವರ್ಷದ ಶ್ವೇತಾ, 20 ವರ್ಷದ ಚೈತ್ರ, 28 ವರ್ಷದ ಪ್ರಿಯಾಂಕಾ ಹಾಗೂ ಕಾರು ಚಾಲಕ ಮಹೇಶ್ ಮೃತಪಟ್ಟಿದ್ದಾರೆ. ಸ್ಥಳೀಯರು ರವಿ ಮತ್ತು ನಾಲ್ಕು ವರ್ಷದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಕುಟುಂಬದ ಸಂತಸದ ಪ್ರವಾಸ ಕ್ಷಣಾರ್ಧದಲ್ಲಿ ಶೋಕ ಸಾಗರವಾಗಿದ್ದು, ಈ ದುರಂತ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.
