ಬೆಂಗಳೂರು ನಗರದ ಕೆಂಗೇರಿ ಠಾಣಾ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದ ಭೀಕರ ಘಟನೆ ಒಂದು ಕುಟುಂಬದ ದುಸ್ಥಿತಿಯನ್ನು ಬಯಲಿಗೆಳೆದಿದೆ. ಮದ್ಯಪಾನದ ಚಟ ಮತ್ತು ಆಸ್ತಿ ವಿಚಾರದ ಜಗಳ ಕೊನೆಗೆ ಹೆತ್ತ ತಾಯಿಯ ಜೀವವನ್ನೇ ಬಲಿತೆಗೆದುಕೊಂಡಿದೆ.
75 ವರ್ಷದ ಜಯಮ್ಮ ಕೊಲೆಯಾದ ವೃದ್ಧೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮಗಳು ಭಾಗ್ಯಲಕ್ಷ್ಮಿ ಹಾಗೂ ಮೊಮ್ಮಗ ಕುಶಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ, ಈ ಕುಟುಂಬದಲ್ಲಿ ಮದ್ಯಪಾನದ ಚಟ ಗಂಭೀರ ಮಟ್ಟಕ್ಕೆ ತಲುಪಿತ್ತು. ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. ಭಾನುವಾರ ರಾತ್ರಿ ಆಸ್ತಿ ಮಾರಾಟದ ಹಣದ ವಿಚಾರವಾಗಿ ಜಯಮ್ಮ ಮತ್ತು ಮಗಳು ಭಾಗ್ಯಲಕ್ಷ್ಮಿ ನಡುವೆ ತೀವ್ರ ವಾಗ್ವಾದ ನಡೆದಿದೆ.
ಜಗಳ ತಾರಕಕ್ಕೇರಿದ ವೇಳೆ ಕುಶಾಲ್ ಕೂಡ ತಾಯಿಯ ಬೆಂಬಲಕ್ಕೆ ನಿಂತಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಮುದ್ದೆ ಮಾಡುವ ಕೋಲಿನಿಂದ ಜಯಮ್ಮ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಜಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ತಾಯಿ-ಮಗ ಇಬ್ಬರೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ, ಕೆಲವೇ ಹೊತ್ತಿನಲ್ಲಿ ಕುಶಾಲ್ ತನ್ನ ಸ್ನೇಹಿತನಿಗೆ ಕರೆ ಮಾಡಿ, “ಅಜ್ಜಿ ಸತ್ತಿದ್ದಾರೆ, ಬಾ ಕುಡಿಯೋಣ” ಎಂದು ಕರೆದಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಸ್ನೇಹಿತ ಮನೆಗೆ ಬಂದಾಗ, ಜಯಮ್ಮ ಅವರ ಮೃತದೇಹದ ಪಕ್ಕದಲ್ಲೇ ಕುಶಾಲ್ ಮದ್ಯಪಾನ ಮಾಡುತ್ತಿದ್ದುದನ್ನು ನೋಡಿ ಬೆಚ್ಚಿಬಿದ್ದಿದ್ದಾನೆ. ಮೃತದೇಹದ ಮೇಲಿದ್ದ ಗಾಯಗಳನ್ನು ಗಮನಿಸಿದ ಆತ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಾಹಿತಿ ಪಡೆದ ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದಾಗ ಕೊಲೆ ನಡೆದಿರುವುದು ದೃಢಪಟ್ಟಿದೆ. ತಕ್ಷಣವೇ ಭಾಗ್ಯಲಕ್ಷ್ಮಿ ಮತ್ತು ಕುಶಾಲ್ ಅವರನ್ನು ಬಂಧಿಸಿ ವಿಚಾರಣೆ ಆರಂಭಿಸಲಾಗಿದೆ.
ಒಂದು ಕಾಲದಲ್ಲಿ ಸುಸ್ಥಿತಿಯಲ್ಲಿದ್ದ ಕುಟುಂಬ, ಮದ್ಯಪಾನದ ದುಷ್ಚಟದಿಂದ ಹೇಗೆ ದುರಂತದ ದಾರಿಗೆ ತಲುಪಿತು ಎಂಬುದಕ್ಕೆ ಈ ಘಟನೆ ಮತ್ತೊಂದು ಕಹಿ ಉದಾಹರಣೆಯಾಗಿದೆ.
