ಉತ್ತರ ಪ್ರದೇಶದ ಘಾಜಿಯಾಬಾದ್‌ನ ಟ್ರೋನಿಕಾ ಸಿಟಿಯಲ್ಲಿ ದಾರುಣ ಘಟನೆ ನಡೆದಿದ್ದು, ಪತ್ನಿ ಹಾಗೂ ಆಪ್ತ ಸ್ನೇಹಿತನ ನಡುವೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ವ್ಯಕ್ತಿಯೊಬ್ಬ ಇಬ್ಬರನ್ನೂ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

38 ವರ್ಷದ ರಶೀದ್, ತನ್ನ ಪತ್ನಿ ಶಬನಂ ಹಾಗೂ ಸ್ನೇಹಿತ ಫಹೀಮ್ ನಡುವೆ ಕಳೆದ ಎರಡು ವರ್ಷಗಳಿಂದ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದ. ಪತ್ನಿ ತನ್ನನ್ನು ಬಿಟ್ಟು ಹೋಗಲು ಯೋಜಿಸುತ್ತಿದ್ದಾಳೆ ಎಂಬ ಮಾಹಿತಿ ತಿಳಿದ ನಂತರ ಅವನ ಆಕ್ರೋಶ ಹೆಚ್ಚಾಗಿತ್ತು.

ಸೋಮವಾರ ಸಂಜೆ ರಶೀದ್, ಫಹೀಮ್‌ನನ್ನು ಊಟಕ್ಕೆ ಮನೆಗೆ ಆಹ್ವಾನಿಸಿದ್ದ. ಮೂವರೂ ಒಟ್ಟಿಗೆ ಊಟ ಮಾಡಿ, ನಂತರ ಸಿಗರೇಟ್ ಸೇದಿದ್ದಾರೆ. ಬಳಿಕ ರಶೀದ್ ಬೆಡ್‌ರೂಮ್‌ನಲ್ಲಿದ್ದ ಕಪಾಟಿನಿಂದ ಪಿಸ್ತೂಲ್ ತೆಗೆದುಕೊಂಡು, ಮೊದಲು ಫಹೀಮ್‌ಗೆ ಹಾಗೂ ನಂತರ ಪತ್ನಿ ಶಬನಂಗೆ ಹತ್ತಿರದಿಂದ ತಲೆಗೆ ಗುಂಡು ಹಾರಿಸಿದ್ದಾನೆ. ಈ ಭೀಕರ ದೃಶ್ಯವನ್ನು ದಂಪತಿಯ 7 ವರ್ಷದ ಮಗ ಕಣ್ಣಾರೆ ಕಂಡಿದ್ದಾನೆ.

ಕೊಲೆ ಮಾಡಿದ ಬಳಿಕ, ಮಗನಿಗೆ ‘ಈಗ ಎಲ್ಲವೂ ಸರಿ ಆಗುತ್ತದೆ’ ಎಂದು ಹೇಳಿ ರಶೀದ್ ಸ್ಥಳದಿಂದ ಪರಾರಿಯಾಗಿದ್ದಾನೆ. ನೆರೆಹೊರೆಯವರು ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರೂ, ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ.

ಫಹೀಮ್ ತಂದೆಯ ದೂರಿನ ಮೇರೆಗೆ, ಪೊಲೀಸರು ರಶೀದ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಶೀದ್‌ಗೆ ಪಿಸ್ತೂಲ್ ಎಲ್ಲಿಂದ ಸಿಕ್ಕಿತು ಎಂಬುದರ ಕುರಿತೂ ತನಿಖೆ ನಡೆಯುತ್ತಿದೆ.

ತನಿಖೆಯಲ್ಲಿ ರಶೀದ್ ಮತ್ತು ಫಹೀಮ್ ಇಬ್ಬರಿಗೂ ಕ್ರಿಮಿನಲ್ ಹಿನ್ನೆಲೆ ಇರುವುದು ಬಹಿರಂಗವಾಗಿದೆ. ಫಹೀಮ್ ವಿರುದ್ಧ ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಿದ್ದು, ರಶೀದ್ ಕೂಡ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದನು.

ಈ ದಂಪತಿಗೆ ಏಳು ಮಕ್ಕಳು ಇದ್ದು, ಹಿರಿಯ ಮಗನ ಮದುವೆಯ ನಂತರವೇ ಈ ಅಕ್ರಮ ಸಂಬಂಧದ ವಿಚಾರ ಬೆಳಕಿಗೆ ಬಂದಿತ್ತು. ಅದರಿಂದಲೇ ಮನೆಯಲ್ಲಿನ ಕಲಹ ಹೆಚ್ಚಾಗಿತ್ತು. ಹಲವು ಬಾರಿ ಎಚ್ಚರಿಕೆ ನೀಡಿದರೂ ಸಂಬಂಧ ಮುಂದುವರಿದಿದ್ದು, ಕೊನೆಗೆ ಈ ದಾರುಣ ಘಟನೆಗೆ ಕಾರಣವಾಗಿದೆ.

Related News

error: Content is protected !!