ಕೋಲಾರ: ಹಣ-ಆಸ್ತಿಗಾಗಿ ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಆರೋಪದ ಪ್ರಕರಣ ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿಯ ಚನ್ನಸಂದ್ರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಆಸ್ತಿ ವಿಚಾರದಲ್ಲಿ ನಡೆದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಹಾಗೂ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಚನ್ನಸಂದ್ರ ಗ್ರಾಮದ 66 ವರ್ಷದ ನಾರಾಯಣಸ್ವಾಮಿ ಅವರನ್ನು ಗಂಭೀರ ಸ್ಥಿತಿಯಲ್ಲಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ತಂದೆಯನ್ನು ಉಳಿಸಿಕೊಳ್ಳುವಂತೆ ಮಗ ಪ್ರಮೋದ್ ವೈದ್ಯರ ಬಳಿ ಮನವಿ ಮಾಡುತ್ತಿದ್ದ. ಇದೇ ವೇಳೆ ನಾರಾಯಣಸ್ವಾಮಿಯ ಪತ್ನಿ 58 ವರ್ಷದ ಜಗದಂಬಾ ವೇಮಗಲ್ ಪೊಲೀಸ್ ಠಾಣೆಗೆ ತೆರಳಿ, ‘ನನ್ನ ಗಂಡನನ್ನು ನಾನೇ ಕೊಲೆ ಮಾಡಿದ್ದೇನೆ, ನನ್ನನ್ನು ಬಂಧಿಸಿ’ ಎಂದು ಶರಣಾಗಿದ್ದಳು.

ಮೊದಲಿಗೆ ಪತ್ನಿಯ ಹೇಳಿಕೆ ಕೇಳಿದ ಪೊಲೀಸರಿಗೆ ಗಂಡನಿಂದ ಆಕೆಗೆ ಯಾವುದೋ ರೀತಿಯ ಕಿರುಕುಳವಾಗಿರಬಹುದು ಎಂಬ ಅನುಮಾನ ಮೂಡಿತ್ತು. ಆದರೆ ತನಿಖೆ ಮುಂದುವರಿದಂತೆ ಅಸಲಿ ಕಥೆ ಬಯಲಾಗಿದೆ.

ನಾಲ್ಕು ಎಕರೆ ಮಾರಾಟ, ಉಳಿದ ಎರಡು ಎಕರೆ ಮೇಲೆ ಕಣ್ಣು

ಪೊಲೀಸರ ಪ್ರಕಾರ, ನಾರಾಯಣಸ್ವಾಮಿ ಕಳೆದ ಸುಮಾರು 15 ವರ್ಷಗಳಿಂದ ಪತ್ನಿ ಜಗದಂಬಾ ಹಾಗೂ ಪುತ್ರ ಪ್ರಮೋದ್‌ನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಮ್ಮ ಬಳಿ ಇದ್ದ ನಾಲ್ಕು ಎಕರೆ ಜಮೀನನ್ನು ಅವರು ಈಗಾಗಲೇ ಮಾರಾಟ ಮಾಡಿದ್ದರು. ಉಳಿದ ಎರಡು ಎಕರೆ ಜಮೀನನ್ನೂ ಮಾರಾಟ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.

ಇದರಿಂದ ತಾಯಿ-ಮಗ ಅಸಮಾಧಾನಗೊಂಡಿದ್ದರು. ಈಗಾಗಲೇ ಮಾರಾಟವಾಗಿದ್ದ ಜಮೀನಿನ ಹಣದಲ್ಲಿ ತಮ್ಮ ಪಾಲು ಸಿಗಲಿಲ್ಲ. ಉಳಿದ ಜಮೀನನ್ನೂ ತಂದೆ ಮಾರಾಟ ಮಾಡಿದರೆ ತಮಗೆ ಏನೂ ಉಳಿಯುವುದಿಲ್ಲ ಎಂಬ ಕಾರಣಕ್ಕೆ ನಾರಾಯಣಸ್ವಾಮಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಊಟದಲ್ಲಿ ನಿದ್ರೆ ಮಾತ್ರೆ, ಬಳಿಕ ಕತ್ತು ಹಿಸುಕಿ ಕೊಲೆ!

ಯೋಜನೆಯಂತೆ ಜಗದಂಬಾ ಮತ್ತು ಪ್ರಮೋದ್ ಕೆಲ ದಿನಗಳಿಂದ ನಾರಾಯಣಸ್ವಾಮಿಯೊಂದಿಗೆ ಆತ್ಮೀಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಘಟನೆ ನಡೆದ ದಿನ ತೋಟದ ಶೆಡ್‌ನಲ್ಲಿ ನುಗ್ಗೆಕಾಯಿ ಸಾಂಬಾರ್ ಮತ್ತು ಮುದ್ದೆ ತಯಾರಿಸಿ ಕೂಲಿ ಕಾರ್ಮಿಕರಿಗೆ ಊಟ ಬಡಿಸಿದ್ದರು.

ಮಧ್ಯಾಹ್ನದ ವೇಳೆಯಲ್ಲಿ ನಾರಾಯಣಸ್ವಾಮಿಗೂ ಊಟ ನೀಡಲಾಗಿದ್ದು, ಅದರಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಊಟ ಮಾಡಿದ ಬಳಿಕ ನಾರಾಯಣಸ್ವಾಮಿ ನಿದ್ರೆಗೆ ಜಾರಿದಾಗ, ಪ್ರಮೋದ್ ಹಗ್ಗ ಬಳಸಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ನಾರಾಯಣಸ್ವಾಮಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪ್ರಕರಣದ ತನಿಖೆ ವೇಳೆ ಪೊಲೀಸರು ತಾಯಿ-ಮಗನ ಹೇಳಿಕೆಗಳನ್ನು ಪರಿಶೀಲಿಸಿದಾಗ ಕೃತ್ಯದ ಹಿಂದಿನ ಸಂಚು ಬಯಲಾಗಿದೆ ಎಂದು ತಿಳಿದುಬಂದಿದೆ.

ತನ್ನ ಮಗನನ್ನು ರಕ್ಷಿಸುವ ಉದ್ದೇಶದಿಂದ ಜಗದಂಬಾ ಪೊಲೀಸರ ಮುಂದೆ ಶರಣಾಗಿದ್ದಳು ಎನ್ನಲಾಗಿದ್ದು, ಮತ್ತೊಂದೆಡೆ ಪ್ರಮೋದ್ ಆಸ್ಪತ್ರೆಯಲ್ಲಿ ತಂದೆಯನ್ನು ಉಳಿಸಲು ಪ್ರಯತ್ನಿಸುತ್ತಿರುವಂತೆ ವರ್ತಿಸುತ್ತಿದ್ದ ಎನ್ನಲಾಗಿದೆ.

ಪ್ರಕರಣದ ತನಿಖೆ ನಡೆಸಿದ ವೇಮಗಲ್ ಪೊಲೀಸರು ಇದೀಗ ಜಗದಂಬಾ ಹಾಗೂ ಪ್ರಮೋದ್‌ನನ್ನು ಬಂಧಿಸಿದ್ದು, ಆಸ್ತಿ ವಿಚಾರವೇ ಕೊಲೆಗೆ ಪ್ರಮುಖ ಕಾರಣವಾಗಿತ್ತೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಹಣ-ಆಸ್ತಿಗಾಗಿ ಹೆತ್ತ ತಂದೆಯನ್ನೇ ಕೊಲೆ ಮಾಡಲು ಮುಂದಾದ ತಾಯಿ-ಮಗನ ಕೃತ್ಯಕ್ಕೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Related News

error: Content is protected !!