ಇತ್ತೀಚಿನ ದಿನಗಳಲ್ಲಿ ಲವ್ ಅಫೇರ್ ಹಾಗೂ ಅಕ್ರಮ ಸಂಬಂಧಗಳ ಹಿನ್ನೆಲೆ ಕುಟುಂಬಗಳಲ್ಲಿ ಅಶಾಂತಿ ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಇದೇ ರೀತಿಯ ಘಟನೆ Bengaluru ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
“ಕಸ ಹಾಕಿ ಬರುತ್ತೇನೆ” ಎಂದು ಮನೆಯಿಂದ ಹೊರಟ ಇಬ್ಬರು ಮಕ್ಕಳ ತಾಯಿ ಪ್ರಿಯಾಂಕಾ ಮತ್ತೆ ಮನೆಗೆ ಮರಳಿ ಬಂದಿಲ್ಲ. ಇದರಿಂದ ಆತಂಕಗೊಂಡ ಪತಿ ಶರತ್ ಕುಮಾರ್, ತನ್ನ ಪತ್ನಿ ಪರಿಚಿತನಾದ ಕಟಿಂಗ್ ಶಾಪ್ ಪ್ರಭು ಜೊತೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ.
ಶರತ್ ಮತ್ತು ಪ್ರಿಯಾಂಕಾ ದಂಪತಿ ಬಾಗಲಗುಂಟೆಯಲ್ಲಿ ವಾಸವಾಗಿದ್ದು, ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಶರತ್ ಕೆಲಸಕ್ಕೆ ತೆರಳುತ್ತಿದ್ದ ಸಮಯದಲ್ಲಿ ಪ್ರಿಯಾಂಕಾ ಮತ್ತು ಪ್ರಭು ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ಇವರ ನಡುವಿನ ಸಂಬಂಧದ ಬಗ್ಗೆ ತಿಳಿದ ಬಳಿಕ ದಂಪತಿಗಳ ನಡುವೆ ವಾಗ್ವಾದವೂ ನಡೆದಿತ್ತು ಎಂದು ಹೇಳಲಾಗಿದೆ.
ಈ ಮಧ್ಯೆ ಏಪ್ರಿಲ್ 11ರ ರಾತ್ರಿ ಸುಮಾರು 11.57ರ ವೇಳೆಗೆ, ಒಂದು ಕೈಯಲ್ಲಿ ಕಸದ ಬುಟ್ಟಿ ಮತ್ತು ಮತ್ತೊಂದು ಕೈಯಲ್ಲಿ ಬ್ಯಾಗ್ ಹಿಡಿದು ಪ್ರಿಯಾಂಕಾ ಮನೆಯಿಂದ ಹೊರಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪತಿಯ ಆರೋಪದಂತೆ, ಆ ರಾತ್ರಿ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಅವನನ್ನು ಮಲಗಿಸಿದ ಬಳಿಕ ಪ್ರಿಯಾಂಕಾ ಮನೆಯಿಂದ ಹೊರಟಿದ್ದಾಳೆ.
ಪತ್ನಿ ಮನೆಗೆ ಮರಳದ ಹಿನ್ನೆಲೆಯಲ್ಲಿ ಶರತ್ ಕುಮಾರ್ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಿಯಾಂಕಾಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
