ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯೊಂದಿಗೆ ಬಲವಂತದ ಸಂಭೋಗ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪತಿಯೊಬ್ಬರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.

ತಮಿಳುನಾಡಿನ ದಕ್ಷಿಣ ಮಧುರೈ ಜಿಲ್ಲೆಯ 37 ವರ್ಷದ ವ್ಯಕ್ತಿಯೊಬ್ಬರು, ತಮ್ಮ ಪತ್ನಿ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ತಿರಸ್ಕರಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಪತ್ನಿ ತನ್ನ ಖಾಸಗಿ ಭಾಗದಲ್ಲಿ ನೋವು ಉಂಟಾಗಿದೆ ಎಂದು ಆಸ್ಪತ್ರೆಗೆ ತೆರಳಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾಗಿ ದೂರಿನಲ್ಲಿ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಅವರು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜೊತೆಗೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಸಂಭೋಗ ನಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಇದು ಸುಳ್ಳು ಪ್ರಕರಣ’ ಎಂದು ವಾದಿಸಿದರು.

ಇದಕ್ಕೆ ಪ್ರತಿಯಾಗಿ, ದೂರುದಾರರಾದ ಪತ್ನಿ ಸ್ವತಃ ವಾದ ಮಂಡಿಸಿ, ‘ಘಟನೆ ನಡೆದ ದಿನ ಬೆಳಗ್ಗೆ 4.40ರ ಸುಮಾರಿಗೆ ಆಸ್ಪತ್ರೆಗೆ ಹೋದಾಗ ಹೊರರೋಗಿ ವಿಭಾಗ ತೆರೆದಿರಲಿಲ್ಲ. ಸ್ತ್ರೀರೋಗ ತಜ್ಞೆಯೂ ಲಭ್ಯ ಇರಲಿಲ್ಲ. ಆದ್ದರಿಂದ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದೇನೆ. ದಾಖಲೆಗಳಲ್ಲಿ ಮಾತ್ರ ಹೊರರೋಗಿ ವಿಭಾಗ ಎಂದು ನಮೂದಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿದರು.

ಅದೇ ವೇಳೆ, ‘ಘಟನೆ ನಡೆದ ಸಂದರ್ಭದಲ್ಲಿ ಪತಿ ಸ್ಥಳದಲ್ಲಿದ್ದುದನ್ನು ಪೊಲೀಸರು ಸಂಗ್ರಹಿಸಿದ ಕಾಲ್ ಡೀಟೆಲ್ಸ್ ರೆಕಾರ್ಡ್ (CDR) ಮೂಲಕ ದೃಢಪಡಿಸಿದ್ದಾರೆ’ ಎಂದೂ ತಿಳಿಸಿದರು.

ಇದನ್ನು ವಿರೋಧಿಸಿದ ಅರ್ಜಿದಾರರ ಪರ ವಕೀಲರು, ‘ಪತ್ನಿಯೇ ಮಾತುಕತೆಗೆ ಪತಿಯನ್ನು ಮನೆಗೆ ಕರೆಸಿಕೊಂಡಿದ್ದು, ಆ ವೇಳೆ ಯಾವುದೇ ಸಂಭೋಗ ನಡೆದಿಲ್ಲ’ ಎಂದು ವಾದಿಸಿದರು.

ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಪೀಠ, ‘ಅತ್ಯಾಚಾರ ಆರೋಪದಂತಹ ಗಂಭೀರ ಪ್ರಕರಣವನ್ನು ಈ ಹಂತದಲ್ಲಿ ರದ್ದುಪಡಿಸಲು ಸಾಧ್ಯವಿಲ್ಲ. ಸಂಭೋಗ ನಡೆದಿದೆ ಅಥವಾ ಆರೋಪ ಸುಳ್ಳು ಎಂಬುದನ್ನು ವಿಚಾರಣಾ ನ್ಯಾಯಾಲಯವೇ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಿರ್ಧರಿಸಬೇಕು’ ಎಂದು ಹೇಳಿತು.

ಇದಲ್ಲದೆ, ‘ಅರ್ಜಿದಾರರು ದೋಷಾರೋಪಗಳನ್ನು ಕೈಬಿಡಲು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ’ ಎಂದು ತಿಳಿಸಿ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ:
ಪತ್ನಿಯ ಪ್ರಕಾರ, ‘2019ರಿಂದ ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. 2021ರ ಅಂತ್ಯದ ವೇಳೆ ಅತ್ಯಾಚಾರದ ಘಟನೆ ನಡೆದಿದೆ’. ಮತ್ತೊಂದೆಡೆ, ಪತಿ ‘2016ರಲ್ಲಿ ಪತ್ನಿಯೇ ಮನೆ ಬಿಟ್ಟು ಹೋಗಿದ್ದಾಳೆ’ ಎಂದು ಹೇಳುತ್ತಿದ್ದಾರೆ. ಇದಲ್ಲದೆ, ಪತ್ನಿ ಕ್ರೌರ್ಯದ ಆರೋಪ ಮತ್ತು ಜೀವನಾಂಶದ ಪ್ರಕರಣಗಳನ್ನೂ ಮುಂದುವರಿಸಿದ್ದಾರೆ.

Related News

error: Content is protected !!