ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ಸ್ನೇಹಿತೆಯೊಬ್ಬಳ ಪ್ರೇಮ ವಿವಾದದ ನಡುವೆ ಅಮಾಯಕ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಚಂದನ್ ಎಂಬ ಯುವಕ ಈ ದುರಂತಕ್ಕೆ ಬಲಿಯಾದವರು. ಕೂಲಿ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದ ಚಂದನ್, ಅದೇ ಗ್ರಾಮದ ಯುವತಿಯೊಬ್ಬಳೊಂದಿಗೆ ಸ್ನೇಹ ಹೊಂದಿದ್ದನು. ಆದರೆ ಆ ಯುವತಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ಮನೆಯವರ ವಿರೋಧದ ನಡುವೆ ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿದ್ದಳು ಎನ್ನಲಾಗಿದೆ.

ಮಗಳು ಕಾಣೆಯಾಗುತ್ತಿದ್ದಂತೆ ಯುವತಿಯ ತಂದೆ ಚಂದನ್ ಮೇಲೆಯೇ ಅನುಮಾನ ವ್ಯಕ್ತಪಡಿಸಿ, “ಮಗಳನ್ನು ನೀನೇ ಬಚ್ಚಿಟ್ಟಿದ್ದೀಯ” ಎಂದು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದರೆಂದು ಆರೋಪಿಸಲಾಗಿದೆ. “ನನಗೆ ಏನೂ ಗೊತ್ತಿಲ್ಲ” ಎಂದು ಚಂದನ್ ಹೇಳಿದರೂ, ಆತನ ಮಾತು ನಂಬಲಾಗಲಿಲ್ಲ ಎನ್ನಲಾಗಿದೆ.

ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಬೀರೂರು ಪೊಲೀಸ್ ಠಾಣೆ ಪೊಲೀಸರು ಚಂದನ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಇತ್ತ ಮನೆ ಬಿಟ್ಟು ಹೋಗಿದ್ದ ಯುವತಿ ತನ್ನ ತಂದೆಗೆ ಪತ್ರ ಬರೆದು, “ಚಂದನ್ ನನಗೆ ಅಣ್ಣನಂತೆ. ಆತನಿಗೆ ಯಾವುದೇ ಸಂಬಂಧ ಇಲ್ಲ. ಅವನಿಗೆ ಕಿರುಕುಳ ಕೊಡಬೇಡಿ” ಎಂದು ಸ್ಪಷ್ಟಪಡಿಸಿದ್ದಾಳೆ ಎನ್ನಲಾಗಿದೆ. ಆದರೂ ಕಿರುಕುಳ ಮುಂದುವರಿದಿತ್ತು ಎಂದು ಕುಟುಂಬಸ್ಥರು ದೂರಿದ್ದಾರೆ.

ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಚಂದನ್, ತನ್ನ ಪೋಷಕರಿಗೆ ವಾಟ್ಸಾಪ್ ಮೂಲಕ ಆಡಿಯೋ ಹಾಗೂ ಸಂದೇಶ ಕಳುಹಿಸಿ, ಬಳಿಕ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಸ್ನೇಹಿತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೀರೂರು ಠಾಣೆ ಮುಂದೆ ಪ್ರತಿಭಟನೆ ನಡೆಸಿ, ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಗ್ರಾಮಸ್ಥರ ಮನಕಲಕಿದ್ದು, ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

Related News

error: Content is protected !!