ಉತ್ತರ ಕನ್ನಡ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಅಣ್ಣನನ್ನೇ ತಮ್ಮ ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಗ್ರಾಮದ ಇಡ್ತಳ್ಳಿಯಲ್ಲಿ ನಡೆದಿದೆ.
ಕೊಲೆಯಾದವರು ಪರಮೇಶ್ವರ ಬಾಬು ನಾಯ್ಕ್ (35). ಕೊಲೆ ಆರೋಪಿಯಾಗಿರುವ ಪರಮೇಶ್ವರ ತಿಮ್ಮಾ ನಾಯ್ಕ್ (27) ಸದ್ಯ ಪರಾರಿಯಾಗಿದ್ದಾನೆ. ಇಬ್ಬರೂ ಸಂಬಂಧದಲ್ಲಿ ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಾಗಿದ್ದು, ಅಣ್ಣ ತಮ್ಮಂದಿರಂತೆ ಬೆಳೆದಿದ್ದರು.
ಕಳೆದ ಒಂದೆರಡು ವರ್ಷಗಳಿಂದ ಪರಮೇಶ್ವರ ತಿಮ್ಮಾ ನಾಯ್ಕ್, ಪರಮೇಶ್ವರ ಬಾಬು ನಾಯ್ಕ್ ಅವರ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಪರಮೇಶ್ವರ ಬಾಬು ನಾಯ್ಕ್ ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ದ್ವೇಷ ಬೆಳೆಸಿಕೊಂಡಿದ್ದ ಆರೋಪಿ, ನಿನ್ನೆ ರಾತ್ರಿ ಹೊರಗೆ ಮಾತನಾಡಬೇಕು ಎಂದು ಕರೆದುಕೊಂಡು ಹೋಗಿದ್ದಾನೆ. ಬಳಿಕ ಸಮೀಪದ ಅರಣ್ಯ ಪ್ರದೇಶದಲ್ಲಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಮೇಶ್ವರ ಬಾಬು ನಾಯ್ಕ್ ಅವರನ್ನು ಕೊ*ಲೆ ಮಾಡಿ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾಗಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
