ಆಂಧ್ರಪ್ರದೇಶ: ಎಂಟು ವರ್ಷಗಳ ಕಾಲ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಯುವಕನೇ ಕೊನೆಗೆ ಮತ್ತೊಬ್ಬಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ತಿಳಿದು ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಬರೆದಿಟ್ಟ ಡೆತ್‌ನೋಟ್‌ನಲ್ಲಿ, “ನಾನು ನನ್ನ ಪತಿ ಎಂದು ನಂಬಿದ್ದ ಸಾಯಿ ಕೈಯಿಂದಲೇ ನನ್ನ ಅಂತ್ಯಕ್ರಿಯೆ ನಡೆಯಬೇಕು” ಎಂದು ತನ್ನ ಕೊನೆಯ ಆಸೆಯನ್ನು ಯುವತಿ ವ್ಯಕ್ತಪಡಿಸಿದ್ದಾಳೆ.

ಮೃತ ಯುವತಿಯನ್ನು ಕೀರ್ತಿ ಎಂದು ಗುರುತಿಸಲಾಗಿದ್ದು, ಆಕೆ ಮುಂಬೈನ ಐಟಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ದುಬೈನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ ಪಾಪಿನೇನಿ ಸಾಯಿ ಸುಮಂತ್ ಎಂಬ ಯುವಕನೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದು, ಅದು ಬಳಿಕ ಪ್ರೀತಿಯಾಗಿ ಬೆಳೆಯಿತು. ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಶೀಘ್ರದಲ್ಲೇ ಮದುವೆಯಾಗುವ ನಿರ್ಧಾರವನ್ನೂ ಮಾಡಿಕೊಂಡಿದ್ದರು ಎನ್ನಲಾಗಿದೆ.

ಆದರೆ ಕೀರ್ತಿಗೆ ತಿಳಿಯದಂತೆ ಸಾಯಿ ಸುಮಂತ್ ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ವಿಚಾರ ತಿಳಿದ ಕೀರ್ತಿ ಆತನನ್ನು ಪ್ರಶ್ನಿಸಿದಾಗ, ಆತ ನಿರ್ಲಕ್ಷ್ಯದ ಉತ್ತರ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬೆಳವಣಿಗೆಯಿಂದ ತೀವ್ರವಾಗಿ ಮನನೊಂದ ಕೀರ್ತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನೆ ಬಳಿಕ ಕೀರ್ತಿಯ ಕುಟುಂಬಸ್ಥರು ಮೃತದೇಹವನ್ನು ಪ್ರಕಾಶಂ ಜಿಲ್ಲೆಯ ಟಂಗುಟೂರು ಮಂಡಲದ ಪೊಂದೂರಿನಲ್ಲಿರುವ ಸಾಯಿ ಸುಮಂತ್ ನಿವಾಸದ ಮುಂದೆ ತೆಗೆದುಕೊಂಡು ಹೋಗಿ ಪ್ರತಿಭಟನೆ ನಡೆಸಿದರು. “ಕೀರ್ತಿ ಸಾಯಿಯನ್ನು ತನ್ನ ಪತಿ ಎಂದು ನಂಬಿದ್ದಳು. ಆದ್ದರಿಂದ ಆಕೆಯ ಕೊರಳಿಗೆ ಸಾಯಿಯೇ ತಾಳಿ ಕಟ್ಟಬೇಕು ಹಾಗೂ ಆತನೇ ಅಂತ್ಯಕ್ರಿಯೆ ನೆರವೇರಿಸಬೇಕು” ಎಂದು ಕುಟುಂಬಸ್ಥರು ಆಗ್ರಹಿಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸಾಯಿ ಸುಮಂತ್ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಸ್ಥಳದಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಕೀರ್ತಿಯ ಕುಟುಂಬದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಆರಂಭವಾದ ಪ್ರೇಮ ಸಂಬಂಧ ದುರಂತ ಅಂತ್ಯ ಕಂಡಿರುವ ಈ ಘಟನೆ ಪ್ರಕಾಶಂ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರೇಮ ಸಂಬಂಧಗಳಲ್ಲಿ ನಂಬಿಕೆ, ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯ ಮಹತ್ವವನ್ನು ಈ ಪ್ರಕರಣ ಮತ್ತೊಮ್ಮೆ ನೆನಪಿಸಿದೆ.

Related News

error: Content is protected !!