ಹೊಸಪೇಟೆ: ಜಮೀನಿನ ಹದ್ದುಬಸ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹೆಚ್.ಬಿ.ಹಳ್ಳಿ ಎಡಿಎಲ್‌ಆರ್ (ADLR) ಕಚೇರಿಯ ಸರ್ವೇಯರ್ ಕೊಟ್ರೇಶ್ ನಾಯಕ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ದೂರುದಾರ ದೇವೇಂದ್ರ ವರದಾಪುರ ಅವರು ತಮ್ಮ ಜಮೀನಿನ ಹದ್ದುಬಸ್ತಿಗಾಗಿ 2024ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ವೇಯರ್ ಕೊಟ್ರೇಶ್ ನಾಯಕ್ ಕೆಲಸವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಾ ಹಲವು ತಿಂಗಳುಗಳಿಂದ ಸತಾಯಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಈಗಾಗಲೇ ₹10 ಸಾವಿರ ಲಂಚ ಪಡೆದಿದ್ದ ಆರೋಪಿ, ಕೆಲಸ ಪೂರ್ಣಗೊಳಿಸಲು ಮತ್ತೆ ₹30 ಸಾವಿರ ನೀಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಇದರಿಂದ ಬೇಸತ್ತ ದೂರುದಾರರು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದರು.

ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಕೊಟ್ರೇಶ್ ನಾಯಕ್ ಅವರನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ದಾಳಿ ಹೇಗೆ ನಡೆಯಿತು?

ಪೊಲೀಸ್ ಉಪಾಧೀಕ್ಷಕ ಸಚಿನ್ ಎಸ್. ಛಲವಾದಿ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ರಾಜೇಶ್ ಎಸ್. ಲಮಾಣಿ ನೇತೃತ್ವದಲ್ಲಿ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಅಮರೇಶ್ ಹುಬ್ಬಿ ಸೇರಿದಂತೆ ಸಿಬ್ಬಂದಿಗಳಾದ ಸುರೇಶ್, ಶ್ರೀನಿವಾಸ, ರೇಣುಕಪ್ಪ, ಕುಮಾರ ನಾಯ್ಕ, ಚನ್ನಬಸಪ್ಪ ಹಾಗೂ ಕೃಷ್ಣ ಭಾಗವಹಿಸಿದ್ದರು.

ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

Related News

error: Content is protected !!