ಬೆಂಗಳೂರು ಗ್ರಾಮಾಂತರ: ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಿದ ವ್ಯಕ್ತಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದ ಸಮೀಪ ಬೆಳಕಿಗೆ ಬಂದಿದೆ.
40 ವರ್ಷದ ಸರೋಜಾ ಕೊಲೆಯಾದ ಮಹಿಳೆಯಾಗಿದ್ದು, ಆರೋಪಿ ರಾಮಾಂಜಿ (45) ಎಂದು ಗುರುತಿಸಲಾಗಿದೆ. ಆತ ಬಳಿಕ ರೈಲಿಗೆ ತಲೆಕೊಟ್ಟು ಜೀವತ್ಯಾಗ ಮಾಡಿರುವುದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದೇವನಹಳ್ಳಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಸರೋಜಾ ಹಾಗೂ ರಾಮಾಂಜಿ ಕಳೆದ ಒಂದು ವರ್ಷದಿಂದ ಪರಿಚಯ ಹೊಂದಿದ್ದು, ಅವರ ನಡುವೆ ಅನೈತಿಕ ಸಂಬಂಧ ಬೆಳೆಯಿತ್ತು. ಸರೋಜಾ ತನ್ನ ಗಂಡನಿಂದ ವಿಚ್ಛೇದನ ಪಡೆದುಕೊಂಡ ನಂತರ ರಾಮಾಂಜಿಯ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.
ಈ ನಡುವೆ ಮದುವೆಯಾಗುವಂತೆ ರಾಮಾಂಜಿ ಒತ್ತಾಯಿಸಿದ್ದರೂ, ಸರೋಜಾ ಅದಕ್ಕೆ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ರಾಮಾಂಜಿ, ಪೂರ್ವಯೋಜಿತವಾಗಿ ಆಕೆಯನ್ನು ಲಾಂಗ್ ಡ್ರೈವ್ ನೆಪದಲ್ಲಿ ಕರೆದುಕೊಂಡು ಹೋಗಿ ಹತ್ಯೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಹತ್ಯೆ ಬಳಿಕ ಸಾಕ್ಷ್ಯ ನಾಶಪಡಿಸಲು ಕಾರಿಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಘಟನೆಯ ನಂತರ ಪರಾರಿಯಾಗಿದ್ದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ನಡೆಯುತ್ತಿದ್ದ ವೇಳೆ, ಸರೋಜಾ ಹತ್ಯೆಯ ಬಳಿಕ ರಾಮಾಂಜಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.
