
ಮುಂಡಗೋಡ: ತಾಲ್ಲೂಕಿನ ರೈತರು ತಮ್ಮ ಕೃಷಿ ಬೇಸಾಯದೊಂದಿಗೆ ಜೇನು ಕೃಷಿ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ರಾಷ್ಟ್ರೀಯ ಜೇನುಮಂಡಳಿ ನವದೆಹಲಿ, ಜಿಲ್ಲಾ ಪಂಚಾಯತ್ ಉತ್ತರಕನ್ನಡ ಹಾಗೂ ತಾಲೂಕಾ ತೋಟಗಾರಿಕೆ ಇಲಾಖೆಯವರು 2024-25 ರ ಸಾಲಿನಲ್ಲಿ ಆಸಕ್ತ ರೈತರಿಗೆ ವೈಜ್ಞಾನಿಕ ಜೇನು ಕೃಷಿ ಪದ್ಧತಿ ತರಬೇತಿ ಕಾರ್ಯಕ್ರಮ 30 15-3-2025 ರಿಂದ 21-3-2025 ರವರೆಗೆ ವಿವಿಧ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಯಿತು. ಗುರುವಾರ ಜೇನು ಕೃಷಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಗಳ್ಳಿ ಗ್ರಾಮದ ಕಲ್ಮೇಶ್ವರ ಮಹಾರಾಜರ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಚಿಗಳ್ಳಿ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಗೋಸಾವಿ ದೀಪಬೇಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ಕೂಳ್ಳೂರ ರೈತರು ತಮ್ಮ ಹೊಲಗದ್ದೆಗಳಲ್ಲಿ ಕೃಷಿಯ ಬೆಳೆಯೊಂದಿಗೆ ಜೇನು ಸಾಕಾಣಿಕೆ ಮಾಡಿ ಜೇನಿನ ಉಪ ಉತ್ಪನ್ನಗಳಿಂದ ಆರ್ಥಿಕವಾಗಿ ಸುಧಾರಿಸಬಹುದಾಗಿದೆ ಎಂದರು.
ರೈತರು ಈ ಕುರಿತು ಮುತುವರ್ಜಿವಹಿಸುವುದು ಅತ್ಯಗತ್ಯವಿದೆ. ಬೆಳೆಗಳ ಇಳುವರಿ ಕಡಿಮೆಯಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಜೇನು ಸಾಕಾಣಿಕೆ ಕೈ ಹಿಡಿಯುತ್ತದೆ. ಜೇನು ಸಾಕಾಣಿಕೆ ಮಾಡಲು ಆಸಕ್ತ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ರೈತರು ಜೇನು ಸಾಕಾಣಿಕೆ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕ ಸಭಲರಾಗಬೇಕೆಂದು ಕಿರಣ ತಿಳಿಸಿದರು.
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಯುವಕ ಯಶ್ ರಾಜ ತಾವು ಇಲಾಖೆಯಿಂದ ಸಬ್ಸಿಡಿ ಪಡೆದು ಜೇನು ಕೃಷಿಮಾಡಿ ಯಶಸ್ವಿಯಾದ ಕುರಿತು ಅದರಿಂದ ಪಡೆದಿರುವ ಲಾಭದ ಕುರಿತು ವಿವರಿಸಿ ಹೇಳಿ ಜೇನು ಕೃಷಿಯನ್ನು ಮಾಡುವುದು ಹೇಗೆ ಅದರ ಪಾಲನೆ ಪೋಷಣೆ ಮಾಡುವುದು ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರು, ಕೃಷಿ ಸಖಿಯರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರಮೇಶ ಜಮಖಂಡಿ, ತೋಟಗಾರಿಕೆ ಸಹಾಯಕರಾದ ರಾಮಪ್ಪ ನಡುವಿನಮನಿ ಹಾಗೂ ಜೇನು ಕೃಷಿ ಆಸಕ್ತ ಸಮಾರ 50 ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.






