ಬಾಗಲಕೋಟೆ: ಸ್ವಾವಲಂಬಿ ಸಾರಥಿ ಯೋಜನೆಯಡಿ ಮಂಜೂರಾದ ₹3 ಲಕ್ಷ ಸಹಾಯಧನದ ಮಂಜೂರಾತಿ ಆದೇಶ ನೀಡಲು ಹಾಗೂ ವಾಹನದ ಜಿಪಿಎಸ್ ಫೋಟೊ ಮಾಡಿಸುವುದಕ್ಕೆ ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ಕಾರಿ ನೌಕರನೊಬ್ಬ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಥಮ ದರ್ಜೆ ಸಹಾಯಕ ಗುರುನಾಥ ಎಂ. ಮಸಳಿ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಆರೋಪಿ.

ಮುಧೋಳ ತಾಲ್ಲೂಕಿನ ಜಾಲಿಬೇರಿ ಗ್ರಾಮದ ಬಸವರಾಜ ಗೋವಿಂದಪ್ಪ ಮೆಟಗುಡ್ಡ ಅವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಫಿರ್ಯಾದಿದಾರರಿಗೆ 2025–26ನೇ ಸಾಲಿನ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯಡಿ ಗೂಡ್ಸ್ ವಾಹನ ಖರೀದಿಗೆ ₹3 ಲಕ್ಷ ಸಹಾಯಧನ ಮಂಜೂರಾಗಿತ್ತು. ಈ ಸಹಾಯಧನದ ಮೊತ್ತವನ್ನು ಮಹೇಂದ್ರಾ ಫೈನಾನ್ಸ್‌ಗೆ ಬಿಡುಗಡೆ ಮಾಡುವ ಮಂಜೂರಾತಿ ಆದೇಶ ನೀಡಲು ಆರೋಪಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸೆಪ್ಟೆಂಬರ್ 8ರಂದು ಮಂಜೂರಾತಿ ಆದೇಶ ನೀಡಿದ ಬಳಿಕ, ಯೋಜನೆಯಡಿ ವಾಹನ ಖರೀದಿಸಿದ ನಂತರ ಜಿಪಿಎಸ್ ಫೋಟೊ ಮಾಡಿಸಬೇಕಿದ್ದು, ಅದಕ್ಕಾಗಿ ವಾಹನವನ್ನು ತಮ್ಮ ಬಳಿ ತರಬೇಕು ಎಂದು ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ. ಈ ಕೆಲಸಕ್ಕಾಗಿ ₹3 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಲಂಚದ ಬೇಡಿಕೆ ಕುರಿತು ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ, ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಗುರುನಾಥ ಎಂ. ಮಸಳಿಯನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಡಿಎಸ್‌ಪಿ ಸುರೇಶರೆಡ್ಡಿ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ವಿ.ಎನ್. ಕಡಿ, ಮಲ್ಲಿಕಾರ್ಜುನ ಬಿ. ಬಿರಾದಾರ ಹಾಗೂ ಎನ್.ಆರ್. ಖಿಲಾರೆ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾವಿ ಅವರ ನೇತೃತ್ವದಲ್ಲಿ ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.

Related News

error: Content is protected !!