ತಮಿಳುನಾಡಿನ Kanchipuram ಜಿಲ್ಲೆಯ ಉತ್ತಿರಮೇರೂರು ಸಮೀಪ ಮಾನವೀಯತೆಯನ್ನೇ ನಾಚಿಸುವ ಘಟನೆ ಬೆಳಕಿಗೆ ಬಂದಿದೆ. 15 ವರ್ಷದ ಶಾಲಾ ಬಾಲಕಿಯನ್ನು ಪ್ರಲೋಭನೆ ನೀಡಿ ಅಪಹರಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಲವಂತವಾಗಿ ಮದುವೆಯಾದ ಆರೋಪದಲ್ಲಿ 45 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಗೆ ಈಗಾಗಲೇ ಇಬ್ಬರು ಪತ್ನಿಯರು ಮತ್ತು ನಾಲ್ಕು ಮಕ್ಕಳು ಇರುವ ಸಂಗತಿ ಬಹಿರಂಗವಾಗಿದೆ.
ನೆಲ್ವಾಯಿ ಗ್ರಾಮದ 11ನೇ ತರಗತಿಯ ವಿದ್ಯಾರ್ಥಿನಿ ಜೂನ್ 13ರಂದು ಕುಟುಂಬದವರೊಂದಿಗೆ ಮಲ್ಲಿಕಾಪುರಂನ ಸೇಂಟ್ ಆಂಥೋನಿ ಚರ್ಚ್ ಉತ್ಸವಕ್ಕೆ ತೆರಳಿದ್ದಳು. ಉತ್ಸವ ಮುಗಿದ ಬಳಿಕ ಮನೆಗೆ ವಾಪಸ್ಸಾಗುವ ವೇಳೆ ಆಕೆ ಕಾಣೆಯಾಗಿದ್ದರಿಂದ ಕುಟುಂಬಸ್ಥರು ತಕ್ಷಣ ಉತ್ತಿರಮೇರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಗಾಗಿ ಹುಡುಕಾಟ ಆರಂಭಿಸಿದರು.
ಸೈಬರ್ ಕ್ರೈಂ ವಿಭಾಗದ ನೆರವಿನಿಂದ ಬಾಲಕಿಯ ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸಿದಾಗ, ಸೆಂದಾಂಕುಳಂ ಗ್ರಾಮದ ಜೀವಾ ಅಲಿಯಾಸ್ ಜೀವಾನಂದಂ (45) ಎಂಬಾತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾಯಿತು. ಪೊಲೀಸರು ಆತನ ಮನೆಯನ್ನು ಪರಿಶೀಲಿಸಿದಾಗ ಆತ ತಲೆಮರೆಸಿಕೊಂಡಿರುವುದು ತಿಳಿದುಬಂದಿತು.
ಮೊಬೈಲ್ ಸಿಗ್ನಲ್ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಚೆಂಗಲ್ಪಟ್ಟು ಜಿಲ್ಲೆಯ ಅಚ್ಚರಪ್ಪಾಕ್ಕಂ ಪ್ರದೇಶದ ಒಂದು ಕೊಠಡಿಯಲ್ಲಿ ಜೀವಾನಂದಂನನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದರು. ಆ ವೇಳೆ ಬಾಲಕಿಯ ಕೊರಳಿನಲ್ಲಿ ತಾಳಿ ಇದ್ದುದು ಗಮನಕ್ಕೆ ಬಂದಿದೆ.
ಪೊಲೀಸರ ವಿಚಾರಣೆಯಲ್ಲಿ ಜೀವಾನಂದಂನ ವೈಯಕ್ತಿಕ ಬದುಕಿನ ಹಲವು ಅಂಶಗಳು ಬಯಲಾದವು. ಆತನಿಗೆ ದೇವಿ ಎಂಬ ಮೊದಲ ಪತ್ನಿಯಿದ್ದು, ಮೂವರು ಮಕ್ಕಳಿದ್ದಾರೆ. ಬಳಿಕ ಸುಮಿತ್ರಾ ಎಂಬ ಮಹಿಳೆಯನ್ನು ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ಅಲ್ಲದೆ, ಎರಡನೇ ಪತ್ನಿ ಪ್ರಸ್ತುತ ಗರ್ಭಿಣಿಯಾಗಿರುವುದೂ ತಿಳಿದುಬಂದಿದೆ.
ಇಷ್ಟೆಲ್ಲದರ ನಡುವೆಯೂ, ಜೀವಾನಂದಂ ಸ್ಥಳೀಯ ಸರ್ಕಾರಿ ಶಾಲೆಯ ಅಪ್ರಾಪ್ತ ಬಾಲಕಿಯೊಂದಿಗೆ ಪರಿಚಯ ಬೆಳೆಸಿ, ಆಕೆಯನ್ನು ಪ್ರಲೋಭನೆ ನೀಡಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿ ಗರ್ಭಿಣಿಯಾಗಿರುವುದೂ ದೃಢಪಟ್ಟಿದೆ.
ಜೂನ್ 13ರಂದು ಚರ್ಚ್ ಉತ್ಸವದ ಸಂದರ್ಭದಲ್ಲೇ ಬಾಲಕಿಯನ್ನು ಯೋಜಿತವಾಗಿ ಅಚ್ಚರಪ್ಪಾಕ್ಕಂಗೆ ಕರೆದೊಯ್ದು ದೇವಸ್ಥಾನದಲ್ಲಿ ಬಲವಂತವಾಗಿ ತಾಳಿ ಕಟ್ಟಿದ್ದಾಗಿ ಆರೋಪಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಬಾಲ್ಯವಿವಾಹ ಪ್ರಕರಣಗಳಡಿ ಜೀವಾನಂದಂ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವೆಲ್ಲೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಈ ಘಟನೆ ಸ್ಥಳೀಯ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
