ಕನ್ನಡ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ, ನಿರ್ಮಾಪಕ ಮತ್ತು ಕಂಠದಾನ ಕಲಾವಿದ ದಿಲೀಪ್‌ ರಾಜ್ (48) ಅವರ ಅಕಾಲಿಕ ನಿಧನ ಕನ್ನಡ ಕಲಾರಂಗಕ್ಕೆ ಭಾರೀ ಆಘಾತ ತಂದಿದೆ. ಬುಧವಾರ ಬೆಳಗ್ಗಿನ ಜಾವ ಬಂದ ಈ ದುಃಖದ ಸುದ್ದಿ ಅಭಿಮಾನಿಗಳು ಮತ್ತು ಕಲಾವಿದರನ್ನು ಮೌನಕ್ಕೀಡಾಗಿಸಿದೆ.

ಮಂಗಳವಾರ ರಾತ್ರಿ ಆರೋಗ್ಯವಾಗಿಯೇ ಮಲಗಿದ್ದ ದಿಲೀಪ್‌ ರಾಜ್‌ಗೆ ಏಕಾಏಕಿ ಹೃದಯಾಘಾತವಾಗಿದ್ದು, ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಅವರ ಪಾರ್ಥಿವ ಶರೀರವನ್ನು ಉತ್ತರಹಳ್ಳಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಹಲವಾರು ಕಲಾವಿದರು, ಸ್ನೇಹಿತರು ಹಾಗೂ ಅಭಿಮಾನಿಗಳು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ನಟನೆ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ದಿಲೀಪ್‌ ರಾಜ್‌, ಪತ್ನಿ ಶ್ರೀವಿದ್ಯಾ ಅವರೊಂದಿಗೆ ಸೇರಿ ಅನೇಕ ಜನಪ್ರಿಯ ಧಾರಾವಾಹಿಗಳನ್ನು ನಿರ್ಮಿಸಿದ್ದರು. ಅವರು ನಿರ್ಮಿಸಿದ ʼಹಿಟ್ಲರ್‌ ಕಲ್ಯಾಣʼ, ʼಪಾರುʼ, ʼನಾ ನಿನ್ನ ಬಿಡಲಾರೆʼ, ʼಕೃಷ್ಣ ರುಕ್ಕುʼ ಹಾಗೂ ʼವಿದ್ಯಾ ವಿನಾಯಕʼ ಧಾರಾವಾಹಿಗಳು ಕಿರುತೆರೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದವು.

ಕಿರುತೆರೆಯ ಮೂಲಕ ಜನಮನ ಗೆದ್ದ ಅವರು 2005ರಲ್ಲಿ ಬಿಡುಗಡೆಯಾದ ʼಭಾಯ್ ಫ್ರೆಂಡ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಆರಂಭಿಕ ದಿನಗಳಲ್ಲಿ ಸವಾಲುಗಳನ್ನು ಎದುರಿಸಿದ್ದರೂ, 2007ರಲ್ಲಿ ಬಿಡುಗಡೆಯಾದ ಮಿಲನ ಸಿನಿಮಾದ ಖಳನಾಯಕ ಪಾತ್ರ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಬಳಿಕ ಅವರು ಹಲವು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದರು.

ʼ7 ಓ ಕ್ಲಾಕ್ʼ, ʼಕ್ಷಣ ಕ್ಷಣʼ, ಯು ಟರ್ನ್, ʼಅಂಬಿ ನಿಂಗ್ ವಯಸ್ಸಾಯ್ತೋʼ, ʼಕಿಸ್ಮತ್ʼ ಸೇರಿದಂತೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡ ʼಲವ್‌ ಮಾಕ್ಟೆಲ್‌ 3ʼ ಚಿತ್ರದಲ್ಲಿನ ಅವರ ಪಾತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇನ್ನೊಂದೆಡೆ, ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ʼಹಿಟ್ಲರ್‌ ಕಲ್ಯಾಣʼ ಧಾರಾವಾಹಿಯ ಅಭಿರಾಮ್ ಜಯಶಂಕರ್ ಅಲಿಯಾಸ್‌ ಎಜೆ ಪಾತ್ರ ದಿಲೀಪ್‌ ರಾಜ್‌ಗೆ ಅಪಾರ ಜನಪ್ರಿಯತೆ ತಂದಿತ್ತು. ಈ ಧಾರಾವಾಹಿಯಲ್ಲಿ ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಅವರು ಹೊತ್ತಿದ್ದರು. ಅವರೊಂದಿಗೆ ನಟಿಸಿದ್ದ ಹಲವರು ಇಂದು ಕಣ್ಣೀರಿನ ನಮನ ಸಲ್ಲಿಸುತ್ತಿದ್ದಾರೆ.

error: Content is protected !!