ಕೇರಳದ ಕಣ್ಣೂರು ಜಿಲ್ಲೆ ವ್ಯಾಪ್ತಿಯ ಕೇಳಕಂ ಸಮೀಪದ ಕಾಣಿಚಾರ್ನಲ್ಲಿ ಮನಕಲಕುವ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮಾದಕ ವ್ಯಸನಕ್ಕೆ ಒಳಗಾಗಿದ್ದ ಮಗನೊಬ್ಬ ತನ್ನದೇ ತಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ತನ್ನಿಕುನ್ನು ನಿವಾಸಿಯಾದ ಗೀತಮ್ಮ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು. ಅವರ ಮಗ ಕ್ರಿಸ್ಟಿ ಬೆಂಗಳೂರಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದನು. ಆದರೆ ಮಾದಕ ವ್ಯಸನದ ಚಟದಿಂದ ಓದನ್ನು ಅರ್ಧದಲ್ಲೇ ನಿಲ್ಲಿಸಿ, ಸುಮಾರು ಒಂದು ವಾರದ ಹಿಂದೆ ಊರಿಗೆ ವಾಪಸ್ಸಾಗಿದ್ದನು.
ಶುಕ್ರವಾರ ರಾತ್ರಿ ಸುಮಾರು 10 ಗಂಟೆಯ ವೇಳೆ ತಾಯಿ-ಮಗನ ನಡುವೆ ಗಂಭೀರ ವಾಗ್ವಾದ ಉಂಟಾಗಿದೆ. ವಾಗ್ವಾದ ತೀವ್ರಗೊಂಡಾಗ ಕೋಪೋದ್ರಿಕ್ತನಾದ ಕ್ರಿಸ್ಟಿ, ತಾಯಿಯ ಮಲಗುವ ಕೋಣೆಯಲ್ಲೇ ಚಾಕುವಿನಿಂದ ಕುತ್ತಿಗೆಗೆ ಇರಿದು ಹತ್ಯೆಗೈದಿದ್ದಾನೆ.
ಗೀತಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಅವರ ಅಜ್ಜಿ ಆಘಾತದಿಂದ ಕಿರುಚಾಡಿದ್ದಾರೆ. ಘಟನೆ ಬಳಿಕ ಕ್ರಿಸ್ಟಿ ನೆರೆಹೊರೆಯವರ ಸ್ಕೂಟರ್ನಲ್ಲಿ ಕೇಳಕಂ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಮೃತ ಗೀತಮ್ಮ ಸಮಾಜ ಸೇವಕಿಯಾಗಿದ್ದು, ಮಹಿಳಾ ಮೋರ್ಚಾ ಜಿಲ್ಲಾ ಸಮಿತಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೊತೆಗೆ ಬ್ಯೂಟಿ ಪಾರ್ಲರ್ ಹಾಗೂ ಟೈಲರಿಂಗ್ ಅಂಗಡಿಯನ್ನು ನಡೆಸುತ್ತಿದ್ದರು.
ಮಾದಕ ವ್ಯಸನ ಮತ್ತು ಕುಟುಂಬದ ಒಳಗಿನ ಕಲಹವೇ ಈ ಭೀಕರ ಹತ್ಯೆಗೆ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
