ಶಿರಸಿಯಲ್ಲಿ ನಡೆದಿದ್ದ ಆಯುರ್ವೇದ ವೈದ್ಯನ ಹತ್ಯೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಈ ದಾರುಣ ಕೃತ್ಯದ ಹಿಂದೆ ಸ್ನೇಹಿತನೇ ಇದ್ದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕೆಎಚ್ಬಿ ಕಾಲೋನಿಯ ಹೊಸ ಬಡಾವಣೆಯಲ್ಲಿ ವಾಸವಿದ್ದ ಡಾ. ರಮೇಶ್ ಎಫ್. ಕಲ್ಗುಟ್ಕರ್ ಅವರನ್ನು ಶನಿವಾರ ರಾತ್ರಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಅವರು ಹುಬ್ಬಳ್ಳಿ ರಸ್ತೆಯಲ್ಲಿ ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದರು.
ಐದು ತಿಂಗಳ ಹಿಂದೆ ಪತ್ನಿಯನ್ನು ಹೃದಯಾಘಾತದಿಂದ ಕಳೆದುಕೊಂಡಿದ್ದ ಡಾ. ರಮೇಶ್, ಬಳಿಕ ಪತ್ನಿಯ ತಂಗಿಯೊಂದಿಗೆ ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು. ಮಂಜಗುಣಿ ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿದ್ದು, ಕೇವಲ ಒಂದು ದಿನ ಬಾಕಿ ಇರುವಾಗಲೇ ಈ ದುರ್ಘಟನೆ ನಡೆದಿದೆ.
ಭಾನುವಾರ ಬೆಳಿಗ್ಗೆ ಸಂಬಂಧಿಕರು ಮನೆಗೆ ಭೇಟಿ ನೀಡಿದಾಗ, ವೈದ್ಯರ ಮೃತದೇಹ ಪತ್ತೆಯಾಗಿದ್ದು, ತಕ್ಷಣ ಶಿರಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವೇಗವಾಗಿ ತನಿಖೆ ನಡೆಸಿ, ಕೊಲೆ ಹಿಂದೆ ಹಣದ ಆಸೆ ಇದ್ದಿರುವುದನ್ನು ಪತ್ತೆಹಚ್ಚಿದ್ದಾರೆ. ಮದುವೆಗಾಗಿ ಡಾ. ರಮೇಶ್ ಚಿನ್ನಾಭರಣ ಖರೀದಿಸಿದ್ದ ವಿಚಾರ ತಿಳಿದಿದ್ದ ಸ್ನೇಹಿತನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಆರೋಪಿ ಬಂಧನ, ₹15 ಲಕ್ಷ ಮೌಲ್ಯದ ಚಿನ್ನಾಭರಣ ವಶ

ದಿನಾಂಕ 19ರಂದು ನಡೆದಿದ್ದ ಈ ಕ್ರೂರ ಹತ್ಯೆ ಪ್ರಕರಣದಲ್ಲಿ ಮಂಜುನಾಥ ಪಿ.ಎಲ್ (70), ಪಡುಬೈಲ್ ಮಳಲೂರು (ಶಿವಮೊಗ್ಗ) ನಿವಾಸಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು ₹15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹50,000 ನಗದು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಮತ್ತು ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ್ ವರ್ಮ ಹಾಗೂ ಪಿಐ ರಮೇಶ್ ಹೂಗಾರ್ ಮಾರ್ಗದರ್ಶನ ನೀಡಿದರು. ಹೊಸ ಮಾರುಕಟ್ಟೆ ಠಾಣೆಯ ಪಿಎಸ್ಐ ಬಸವರಾಜ್ ಕನಶೆಟ್ಟಿ ಮತ್ತು ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪೊಲೀಸರ ತ್ವರಿತ ಹಾಗೂ ದಕ್ಷ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
