₹4.50 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ
ಹಳಿಯಾಳ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹4.50 ಲಕ್ಷ ಮೌಲ್ಯದ 30 ಗ್ರಾಂ ತೂಕದ ಚಿನ್ನದ ಮಂಗಳಸೂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು ₹50 ಸಾವಿರ ಮೌಲ್ಯದ ಪ್ಯಾಶನ್ ಪ್ರೊ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಮ್ಮನಕೊಪ್ಪ ಗ್ರಾಮದ ಅಕ್ಷತಾ ಮಂಜುನಾಥ ಕುಂಬಾರ (30) ಅವರು ಫೆ.9ರಂದು ರಾತ್ರಿ ಪತಿ ಹಾಗೂ ಮಗಳೊಂದಿಗೆ ಮುರ್ಕವಾಡದ ಜಾತ್ರಾ ಮಹೋತ್ಸವಕ್ಕೆ ತೆರಳಿದ್ದರು. ದೇವಿಯ ದರ್ಶನ ಪಡೆದು ಅಮ್ಯೂಸ್ಮೆಂಟ್ನಲ್ಲಿ ಆಟವಾಡಿದ ಬಳಿಕ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಲೈಟ್ ಕಂಬದ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ಅವರ ಕೊರಳಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಮಂಗಳಸೂತ್ರವನ್ನು ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದ.
ಕಳುವಾದ ಮಂಗಳಸೂತ್ರದ ಮೌಲ್ಯವನ್ನು ದೂರಿನಲ್ಲಿ ₹1,75,885 ಎಂದು ನಮೂದಿಸಲಾಗಿತ್ತು. ಈ ಕುರಿತು ಅಕ್ಷತಾ ಅವರು ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಳಿಯಾಳ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ತಾಂತ್ರಿಕ ಮಾಹಿತಿ ಹಾಗೂ ಲಭ್ಯವಾದ ಖಚಿತ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡಿತ್ತು.
ಆ.8ರಂದು ಹಳಿಯಾಳ ತಾಲೂಕಿನ ಕಾವಲವಾಡ ಹಾಗೂ ಹೊಸ ಹಡಗಲಿ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಹೊಸ ಹಡಗಲಿಯ ಶಶಿಧರ ಉಳವಪ್ಪ ಬಾರ್ಕಿ, ಕೆ.ಕೆ.ಹಳ್ಳಿಯ ಕಿರಣ ಧರ್ಮರಾಜ್ ಗೋಡಿಮನಿ ಹಾಗೂ ಹಳಿಯಾಳ ನಗರದ ಮಡ್ಡಿಯ ವಾಸಿಮ್ ಶಿರಾಜುದ್ದೀನ್ ಚವಾಣ್ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ಜಾತ್ರೆಯ ಸಂದರ್ಭದಲ್ಲಿ ಮಹಿಳೆಯ ಕೊರಳಿನಿಂದ 30 ಗ್ರಾಂ ತೂಕದ ಚಿನ್ನದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನ ಹಾಗೂ ಬೈಕ್ ವಶ
ಆರೋಪಿಗಳಿಂದ ಸುಮಾರು ₹4.50 ಲಕ್ಷ ಮೌಲ್ಯದ ಚಿನ್ನದ ಮಂಗಳಸೂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು ₹50 ಸಾವಿರ ಮೌಲ್ಯದ ಪ್ಯಾಶನ್ ಪ್ರೊ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ತಂಡಕ್ಕೆ ಎಸ್ಪಿ ಪ್ರಶಂಸೆ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ದಾಂಡೇಲಿ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಅವರ ಮಾರ್ಗದರ್ಶನದಲ್ಲಿ, ಹಳಿಯಾಳ ಪೊಲೀಸ್ ವೃತ್ತ ನಿರೀಕ್ಷಕ ಜಯಪಾಲ್ ಪಾಟೀಲ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐಗಳಾದ ಕೃಷ್ಣಗೌಡ ಅರಕೇರಿ ಹಾಗೂ ಮಹೇಶ್ ಮಾಳಿ ಸೇರಿದಂತೆ ಭೀಮಪ್ಪ ಕೆದರಮಂಡಲಗಿ, ಶ್ರೀಶೈಲ್ ಜಿ.ಎಂ., ಲಕ್ಷ್ಮಣ ಪೂಜಾರಿ, ಅರವಿಂದ ಭಜಂತ್ರಿ, ಮಂಜುನಾಥ ಬಾಲಿ, ನಿಂಗಪ್ಪ ಬಳ್ಳಾರಿ, ವಿನೋದ್, ಬಸವರಾಜ್ ಚವಡಿ, ಬಸವರಾಜ್ ತ್ಯಾಪಿ, ಜೀಪ್ ಚಾಲಕರಾದ ಗಂಗಾಧರ ಹಾಗೂ ಉಮೇಶ್ ತೇಲಿ ಮತ್ತು ಕಾರವಾರ ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗಾ ಅವರು ಆರೋಪಿಗಳ ಪತ್ತೆ ಹಾಗೂ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ ಹೊನ್ನಾವರ: ಬ್ಯಾಂಕ್ನಿಂದ ಹಣ ಪಡೆದು ಹೊರಬಂದ…
ಮುಂಡಗೋಡ ಪಟ್ಟಣ ಸೇರಿ ಬಾಚಣಕಿ, ಪಾಳಾ ಗ್ರಾಮಗಳಲ್ಲಿ ನಿಗಾ; ಸಾರ್ವಜನಿಕರ ಸಹಕಾರಕ್ಕೆ ಮನವಿ ಮುಂಡಗೋಡ: ತಾಲೂಕಿನಲ್ಲಿ ಕಳ್ಳತನ ಸೇರಿದಂತೆ ಅಹಿತಕರ…
ತಿರುಪತಿ: ಬೆಳಗ್ಗೆ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದಾಗ, ಸ್ಥಳೀಯರು ಹಾಗೂ ಪೊಲೀಸರು ಇದೊಂದು ಭೀಕರ ರಸ್ತೆ…
ಪ್ರಯಾಗ್ರಾಜ್: ಡೇಟಿಂಗ್ ಆ್ಯಪ್ಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಶ್ರೀಮಂತ ಪುರುಷರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಬಳಿಕ ಬೆದರಿಕೆ…
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು…
ವಡೋದರಾ: ಸಾಮಾನ್ಯವಾಗಿ ಮುಂಜಾನೆ 3 ಗಂಟೆ ಎಂದರೆ ಬಹುತೇಕರು ಗಾಢ ನಿದ್ರೆಯಲ್ಲಿರುವ ಸಮಯ. ರಸ್ತೆಗಳು ಕೂಡ ನಿರ್ಜನವಾಗಿರುತ್ತವೆ. ಆದರೆ ಗುಜರಾತ್ನ…