ಉತ್ತರ ಪ್ರದೇಶದ ಶ್ಯಾಮ್ಲಿಯಲ್ಲಿ ಎಂಟು ವರ್ಷಗಳ ಪ್ರೇಮ ಸಂಬಂಧ ದುರಂತ ಅಂತ್ಯ ಕಂಡಿರುವ ಅನುಮಾನಾಸ್ಪದ ಘಟನೆ ಬೆಳಕಿಗೆ ಬಂದಿದೆ. ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯೊಬ್ಬಳು ತನ್ನ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಹೊಸ ತಿರುವು ನೀಡುವಂತೆ ಆಕೆಯ ಪ್ರಿಯಕರ ಕುಟುಂಬಸ್ಥರ ವಿರುದ್ಧ ‘ಆನರ್ ಕಿಲಿಂಗ್’ ಆರೋಪ ಹೊರಿಸಿದ್ದಾನೆ.

ಮೃತ ಯುವತಿಯನ್ನು ಕರೀನಾ ಎಂದು ಗುರುತಿಸಲಾಗಿದ್ದು, ಆಕೆ ಹಿಮಾಂಶು ಎಂಬ ಯುವಕನನ್ನು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದಳು ಎಂದು ತಿಳಿದುಬಂದಿದೆ. ಆದರೆ ಈ ಸಂಬಂಧಕ್ಕೆ ಯುವತಿಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಇತ್ತೀಚೆಗೆ ಕರೀನಾಗೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ನೆರವೇರಿಸಲಾಗಿತ್ತು.

ಜುಲೈ 28ರ ರಾತ್ರಿ ಕರೀನಾ ಮತ್ತು ಹಿಮಾಂಶು ನಡುವಿನ ಪ್ರೇಮ ಸಂಬಂಧದ ವಿಚಾರ ನಿಶ್ಚಿತಾರ್ಥವಾಗಿದ್ದ ವರನಿಗೆ ತಿಳಿದುಬಂದಿದೆ. ಬಳಿಕ ಆತ ಕರೀನಾ ಕುಟುಂಬದವರನ್ನು ಸಂಪರ್ಕಿಸಿ ಮದುವೆಯನ್ನು ರದ್ದುಗೊಳಿಸಿದ್ದಾನೆ ಎನ್ನಲಾಗಿದೆ. ನಿಶ್ಚಿತಾರ್ಥ ಮುರಿದುಬಿದ್ದ ಕೆಲವೇ ಗಂಟೆಗಳಲ್ಲಿ ಕರೀನಾ ತನ್ನ ಮನೆಯಲ್ಲೇ ಶವವಾಗಿ ಪತ್ತೆಯಾಗಿರುವುದು ಪ್ರಕರಣವನ್ನು ಮತ್ತಷ್ಟು ಅನುಮಾನಾಸ್ಪದವಾಗಿಸಿದೆ.

ಯುವತಿಯ ಕತ್ತಿನ ಭಾಗದಲ್ಲಿ ನೇಣು ಬಿಗಿದಿರುವಂತ ಗುರುತುಗಳು ಕಂಡುಬಂದಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಈ ನಡುವೆ ಕರೀನಾಳ ಪ್ರಿಯಕರ ಹಿಮಾಂಶು, “ಇದು ಆತ್ಮಹತ್ಯೆಯಲ್ಲ. ಕುಟುಂಬದ ಗೌರವಕ್ಕಾಗಿ ಮನೆಯವರೇ ಕರೀನಾಳನ್ನು ಹತ್ಯೆ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆ ಹಾಗೂ ಕೊಲೆ ಸೇರಿದಂತೆ ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!