ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಬಾಳೆಹೊನ್ನೂರುವರೆಗೆ ಭದ್ರಾ ನದಿ ಪ್ರದೇಶದಲ್ಲಿ ಇತ್ತೀಚೆಗೆ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದ ನಿಗೂಢ ವಿಮಾನ ಸಾರ್ವಜನಿಕರಲ್ಲಿ ಭೀತಿ ಮೂಡಿಸಿತ್ತು. ಇದೀಗ ಈ ಹಾರಾಟದ ಹಿಂದಿನ ನಿಜವಾದ ಕಾರಣ ಬಹಿರಂಗವಾಗಿದ್ದು, ಇದು ಯಾವುದೇ ಕಾನೂನುಬಾಹಿರ ಚಟುವಟಿಕೆ ಅಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತು ಗೃಹ ಸಚಿವರು ವಿಧಾನ ಪರಿಷತ್ತಿನಲ್ಲಿ ಲಿಖಿತ ಉತ್ತರ ನೀಡಿದ್ದು, ಇದು ಕೇಂದ್ರ ಸರ್ಕಾರ ಅನುಮೋದಿತ ವೈಜ್ಞಾನಿಕ ಸಮೀಕ್ಷೆಯ ಭಾಗವಾಗಿದೆ ಎಂದು ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ. ಆರತಿ ಕೃಷ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಲೆನಾಡು ಭಾಗದಲ್ಲಿ ನಡೆದ ಈ ಹಾರಾಟ ಖನಿಜ ಸಂಪತ್ತಿನ ಪತ್ತೆಗಾಗಿ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭೂಗರ್ಭದಲ್ಲಿರುವ ಖನಿಜ ನಿಕ್ಷೇಪಗಳನ್ನು ಗುರುತಿಸುವ ಉದ್ದೇಶದಿಂದ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಕಾರ್ಯವನ್ನು ಭಾರತ ಸರ್ಕಾರ ಎಕ್ಸ್-ಕ್ಯಾಲಿಬರ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೀಡಿದ್ದು, ಹಿಮಾಲಯನ್ ಹೆಲಿ ಸರ್ವಿಸ್ ಲಿಮಿಟೆಡ್ ಸಹಯೋಗದಲ್ಲಿ ಹಾರಾಟ ನಡೆಸಲಾಗುತ್ತಿದೆ.

ಕಡಿಮೆ ಎತ್ತರದಲ್ಲಿ ಹಾರಾಡುವ ಈ ವಿಮಾನದಲ್ಲಿ ಅತ್ಯಾಧುನಿಕ ಮ್ಯಾಗ್ನೆಟಿಕ್ ಗ್ರೇಡಿಯೋ ಮೀಟರ್ ಮತ್ತು ರೇಡಿಯೋ ಮೀಟರ್ ಸಂವೇದಕಗಳನ್ನು ಅಳವಡಿಸಲಾಗಿದ್ದು, ಭೂಗರ್ಭದ ಖನಿಜಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಸಮೀಕ್ಷೆ ಕಾರ್ಯಕ್ಕೆ ಫೆಬ್ರವರಿ 13, 2026ರಿಂದ ಜುಲೈ 31, 2026ರವರೆಗೆ ಅನುಮತಿ ನೀಡಲಾಗಿದೆ.

ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿಲ್ಲ ಎಂಬ ಗೊಂದಲಕ್ಕೂ ಸರ್ಕಾರ ಸ್ಪಷ್ಟನೆ ನೀಡಿದೆ. ಹಿಮಾಲಯನ್ ಹೆಲಿ ಸರ್ವಿಸ್ ಸಂಸ್ಥೆಯು ಫೆಬ್ರವರಿ 13ರಂದೇ ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದೆ ಎಂದು ತಿಳಿಸಿದೆ. ಸಾರ್ವಜನಿಕರಲ್ಲಿ ಉಂಟಾದ ಆತಂಕ ನಿವಾರಣೆಗೆ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.

Related News

error: Content is protected !!