ತೆಲಂಗಾಣದ ಹೈದರಾಬಾದ್ ನಗರದ ಪೋಚರಂ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆ ನಿಶ್ಚಯವಾದ ಬಳಿಕ ತನ್ನಿಗೆ ಹೆಚ್‌ಐವಿ (HIV) ಸೋಂಕು ಇರುವುದನ್ನು ತಿಳಿದು ಹುಡುಗಿಯ ಕುಟುಂಬ ಸಂಬಂಧವನ್ನು ರದ್ದುಗೊಳಿಸಿದ್ದರಿಂದ ಆಕ್ರೋಶಗೊಂಡ ಯುವಕನೊಬ್ಬ, ತನ್ನದೇ ಸೋಂಕಿತ ರಕ್ತವನ್ನು ಯುವತಿಯ ದೇಹಕ್ಕೆ ಸಿರಿಂಜ್ ಮೂಲಕ ಇಂಜೆಕ್ಟ್ ಮಾಡಿದ ಘಟನೆ ನಡೆದಿದೆ.

ಮದುವೆ ನಿಶ್ಚಯದಿಂದ ವಿವಾದಕ್ಕೆ ತಿರುಗಿದ ಘಟನೆ

ಆರೋಪಿ ಮನೋಹರ್ (24) ಮತ್ತು ಸಂತ್ರಸ್ತ ಯುವತಿ ಸಂಬಂಧಿಕರಾಗಿದ್ದು, ಇವರಿಬ್ಬರ ಮದುವೆ ಮಾತುಕತೆ ಮುಗಿದು ನಿಶ್ಚಯವಾಗಿತ್ತು. ಆದರೆ ಮನೋಹರ್‌ನ ಪೋಷಕರು ಹೆಚ್‌ಐವಿ ಸೋಂಕಿನಿಂದ ಮೃತಪಟ್ಟಿದ್ದ ಹಿನ್ನೆಲೆ, ಯುವತಿಯ ತಂದೆಗೆ ಅನುಮಾನ ವ್ಯಕ್ತವಾಗಿತ್ತು. ಇದರಿಂದ ಮನೋಹರ್‌ಗೆ ರಕ್ತ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಅವನು ‘ಹೆಚ್‌ಐವಿ ಪಾಸಿಟಿವ್’ ಎಂಬುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಯುವತಿಯ ಕುಟುಂಬ ಮದುವೆ ಸಂಬಂಧವನ್ನು ರದ್ದುಗೊಳಿಸಿತು.

ದ್ವೇಷದಿಂದ ರೂಪಿಸಿದ ವಿಕೃತ ಸಂಚು

ಮದುವೆ ರದ್ದಾದ ಕಾರಣ ಅವಮಾನಗೊಂಡ ಮನೋಹರ್, ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಪಾಯಕಾರಿ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನಿಗೆ ಬಂದ ಕಾಯಿಲೆ ಯುವತಿಗೂ ಬರಬೇಕು ಎಂಬ ವಿಕೃತ ಮನೋಭಾವದಿಂದ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ.

ಬಲವಂತವಾಗಿ ರಕ್ತ ಇಂಜೆಕ್ಟ್ ಮಾಡಿದ ಆರೋಪ

ಮಾರ್ಚ್ 11ರಂದು ಯುವತಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯದಲ್ಲಿ ಮನೋಹರ್ ಮನೆಗೆ ನುಗ್ಗಿ ಆಕೆಯೊಂದಿಗೆ ಜಗಳವಾಡಿದ್ದಾನೆ. ಬಳಿಕ ತನ್ನ ಬಳಿ ಇಟ್ಟಿದ್ದ ಸಿರಿಂಜ್ ತೆಗೆದು ಬಲವಂತವಾಗಿ ಯುವತಿಯ ಕೈಗೆ ತನ್ನದೇ ರಕ್ತವನ್ನು ಇಂಜೆಕ್ಟ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ “ನನ್ನ ರಕ್ತ ಈಗ ನಿನ್ನ ದೇಹಕ್ಕೂ ಸೇರಿದೆ” ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.

ಆಸ್ಪತ್ರೆಗೆ ದಾಖಲು

ಘಟನೆ ತಿಳಿದ ಕೂಡಲೇ ಯುವತಿಯ ಪೋಷಕರು ಆತಂಕಗೊಂಡು ಆಕೆಯನ್ನು ಹೈದರಾಬಾದ್‌ನ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಗೆ ಜ್ವರ ಕಾಣಿಸಿಕೊಂಡಿದ್ದು, ವೈದ್ಯರು ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.

ಪೊಲೀಸರು ಬಂಧಿಸಿದ ಆರೋಪಿ

ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೋಚರಂ ಐಟಿ ಕಾರಿಡಾರ್ ಪೊಲೀಸರು ಮನೋಹರ್‌ನನ್ನು ಮಾರ್ಚ್ 14ರಂದು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109 ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಬಳಿಕ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Related News

error: Content is protected !!