ಬಂಗಾರಪೇಟೆ : ತಾಲೂಕಿನ ದೊಡ್ಡಪನ್ನಾಂಡಹಳ್ಳಿ ಗ್ರಾಮದಲ್ಲಿ ನಡೆದಿದ್ದ 2 ಸೀಮೆ ಹಸು ಮತ್ತು 4 ಕುರಿ ಕಳ್ಳತನ ಪ್ರಕರಣದ ಆರೋಪಿಗಳು ಮತ್ತು ಮಾಲನ್ನು ಪತ್ತೆ ಮಾಡಲು ಡಿ.ವೈ.ಎಸ್‌.ಪಿ ಎಸ್. ಪಾಂಡುರಂಗ ಹಾಗೂ ಕಾಮಸಮುದ್ರ ಸಿ.ಪಿ.ಐ ಜಿ.ಸಿ.ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಕಾಮಸಮುದ್ರ ಪಿ.ಎಸ್‌.ಐ ಬಿ.ವಿ.ಕಿರಣ್‌ ಕುಮಾ‌ರ್ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು.

ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಠಾಣೆಯ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದ 5 ಕಳವು ಪ್ರಕರಣಗಳಲ್ಲಿ ಅಂತರ್ ರಾಜ್ಯದ ನಾಲ್ವರು ರಾತ್ರಿ ವೇಳೆ ಬೊಲೆರೊ ವಾಹನದಲ್ಲಿ ಬಂದು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಟ್ರ್ಯಾಕ್ಟರ್, ಹಸು, ಕುರಿ, ಹಂದಿಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ವಾಸಿ ಸುರೇಶ್, ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ವಾಸಿ ಸತೀಶ್, ರೂಪೇಶ್, ವೆಂಕಟರಮಣಪ್ಪ ಎಂಬುವರನ್ನು ಬಂಧಿಸಿ, ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಒಟ್ಟು 5 ಕಳವು ಪ್ರಕರಣಗಳಲ್ಲಿ ಕಳ್ಳತನ ಮಾಡಲಾಗಿದ್ದ ರೂ.13,73,200/-ಮೌಲ್ಯದ 1 ಟ್ರಾಕ್ಟರ್‌ ಮತ್ತು ಟ್ರಾಲಿ, 3 ಹಸು, 4 ಕುರಿ, 32 ಹಂದಿಗಳು ಹಾಗು ರೂ.3200/- ನಗದನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಕಾಮಸಮುದ್ರ ಪಿ.ಎಸ್‌.ಐ ಬಿ.ವಿ.ಕಿರಣ್ ಕುಮಾರ್, ವಿಶೇಷ ಅಪರಾಧ ಪತ್ತೆ ತಂಡದ ಸಿಬ್ಬಂದಿ ಮುನಾವ‌ರ್ ಪಾಷಾ, ಮಂಜುನಾಥರೆಡ್ಡಿ, ರಾಮಕೃಷ್ಣಾರೆಡ್ಡಿ, ರಾಮ ರಾವ್, ಮಂಜುನಾಥ, ಮಾರ್ಕೊಂಡ , ಲಕ್ಷ್ಮಣ ತೇಲಿ, ಹಾಗೂ ಜೀಪ್ ಚಾಲಕ ಗುರುಮೂರ್ತಿ ಅವರ ಉತ್ತಮ ಕೆಲಸವನ್ನು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಶ್ಲಾಘಿಸಿದ್ದಾರೆ. ವರದಿ ರೋಶನ್ ಜಮೀರ್

Related News

error: Content is protected !!