ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಯುವಕನೊಬ್ಬನನ್ನು ಅಪಹರಿಸಿ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ ಹಣ ಸಂಗ್ರಹ ಹಾಗೂ ಸೆಕ್ಸ್ ವರ್ಕ್ಗೆ ಬಳಸಿದ ಆರೋಪಗಳು ಕೇಳಿಬಂದಿವೆ. ಈ ಘಟನೆ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದು, ಪೀಡಿತ ಯುವಕ ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.
ನಂಜನಗೂಡಿನ ತ್ಯಾಗರಾಜ ಕಾಲೋನಿಯ ಅನಿಲ್ ಕುಮಾರ್ (ಅಕ್ಷತಾ) ಎಂಬ ಯುವಕ ಈ ಪ್ರಕರಣದ ಪೀಡಿತನಾಗಿದ್ದಾನೆ. ಮಂಗಳೂರು ಮೂಲದ ಅನಿತಾ ಎಂಬ ಮಂಗಳಮುಖಿ ಹಾಗೂ ಆಕೆಯ ತಂಡದ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ.
ಸುಮಾರು ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಸ್ಗಾಗಿ ಕಾಯುತ್ತಿದ್ದ ಅನಿಲ್ ಕುಮಾರ್ ಅವರನ್ನು ಅನಿತಾ ಮತ್ತು ಆಕೆಯ ತಂಡ ಮೋಸದಿಂದ ಕರೆದೊಯ್ದು ಅಪಹರಿಸಿದ್ದಾರೆ ಎನ್ನಲಾಗಿದೆ. ಬಳಿಕ ಅವರನ್ನು ಮಂಗಳೂರಿಗೆ ಕರೆದೊಯ್ದು ಬಲವಂತವಾಗಿ ಸೀರೆ, ಆಭರಣಗಳನ್ನು ಹಾಕಿಸಿ ಮಂಗಳಮುಖಿಯರ ವೇಷದಲ್ಲಿ ಬೀದಿಗಳಲ್ಲಿ ಹಾಗೂ ಅಂಗಡಿಗಳ ಮುಂದೆ ಹಣ ಸಂಗ್ರಹಿಸಲು ಒತ್ತಾಯಿಸಿದ್ದಾರೆ.
ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ವರೆಗೆ ಕಲೆಕ್ಷನ್ ಮಾಡಿಸಿ, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ಗಳನ್ನು ತಯಾರಿಸಿ ಅಪ್ಲೋಡ್ ಮಾಡಲಾಗಿದೆ ಎಂಬ ಆರೋಪವೂ ಇದೆ. ಅಲ್ಲದೆ ಮಂಗಳೂರು ಹಾಗೂ ಕೇರಳ ಭಾಗಗಳಿಗೆ ಕಳುಹಿಸಿ ಸೆಕ್ಸ್ ವರ್ಕ್ಗೆ ಬಳಸಲಾಗಿದೆ ಎಂದು ಪೀಡಿತ ಯುವಕ ದೂರಿನಲ್ಲಿ ತಿಳಿಸಿದ್ದಾರೆ.
ಇದರ ನಡುವೆ, ಆಧಾರ್ ಕಾರ್ಡ್ನಲ್ಲಿ ಟ್ರಾನ್ಸ್ಜೆಂಡರ್ ಎಂದು ನಮೂದಿಸಿ, ಸಮಾಜ ಕಲ್ಯಾಣ ಇಲಾಖೆಯಿಂದ ಅಧಿಕೃತ ಪ್ರಮಾಣಪತ್ರವೂ ಪಡೆಯಲಾಗಿದೆ ಎನ್ನುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ನೀಡಿದೆ. ಮುಂದಿನ ಹಂತದಲ್ಲಿ ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತ ಲಿಂಗ ಬದಲಾವಣೆಗೆ ಯೋಜನೆ ರೂಪಿಸಿದ್ದರ ಬಗ್ಗೆ ಮಾಹಿತಿ ತಿಳಿದ ನಂತರ, ಅನಿಲ್ ಕುಮಾರ್ ಈ ಜಾಲದಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದ್ದಾರೆ.
ತಾನು ಸಂಪಾದಿಸಿದ ಸುಮಾರು 3 ಲಕ್ಷ ರೂಪಾಯಿ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ಆರೋಪಿಗಳು ಬೆದರಿಕೆ ಹಾಕಿದ್ದು, ತಾನು ಕಳ್ಳತನ ಮಾಡಿದ್ದಾಗಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಬಳಿಕ ಪೀಡಿತ ಯುವಕ ಮಂಗಳೂರಿನಿಂದ ನಂಜನಗೂಡಿಗೆ ಮರಳಿ ಬಂದಿದ್ದಾನೆ.
ಆದರೆ, ನಂತರವೂ ಆರೋಪಿಗಳು ಅವರನ್ನು ಮತ್ತೆ ದಂಧೆಗೆ ತಳ್ಳಲು ಪ್ರಯತ್ನಿಸಿದ್ದು, ಮನೆಗೆ ಬಂದು ಗಲಾಟೆ ಮಾಡಿರುವುದಾಗಿ ಆರೋಪಿಸಲಾಗಿದೆ. ಮಾನಸಿಕ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಮೈಸೂರು ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂಜನಗೂಡು ಪೊಲೀಸರು ತಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಪೀಡಿತ ಯುವಕನಿಗೆ ಶೇ.90 ರಷ್ಟು ದೃಷ್ಟಿ ಸಮಸ್ಯೆ ಇದ್ದು, ಅವನಿಗೆ ಲೈಂಗಿಕ ದೌರ್ಬಲ್ಯ ಇಲ್ಲದಿದ್ದರೂ ಟ್ರಾನ್ಸ್ಜೆಂಡರ್ ಪ್ರಮಾಣಪತ್ರ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಒಟ್ಟಾರೆ, ಅಮಾಯಕ ಯುವಕರನ್ನು ಬಲವಂತವಾಗಿ ಮಂಗಳಮುಖಿಯರಾಗಿ ಪರಿವರ್ತಿಸಿ ದುರ್ಬಳಕೆ ಮಾಡುವ ಕರಾಳ ಜಾಲ ಇನ್ನೂ ಸಕ್ರಿಯವಾಗಿದೆ ಎಂಬ ಆತಂಕವನ್ನು ಈ ಪ್ರಕರಣ ಮತ್ತೊಮ್ಮೆ ಎತ್ತಿಹಿಡಿದಿದೆ. ಪ್ರಕರಣದ ಹಿಂದೆ ಇರುವ ನಿಜವಾದ ಸಂಗತಿಗಳು ಏನು, ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ನಿಯಮ ಪಾಲನೆಯಾಯಿತೇ ಎಂಬ ಪ್ರಶ್ನೆಗಳಿಗೆ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಉತ್ತರ ನೀಡಬೇಕಾಗಿದೆ.
ನಂಜನಗೂಡು: ಜಮೀನಿಗೆ ತೆರಳಿದ್ದ 63 ವರ್ಷದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ…
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಭೀಕರ ಹತ್ಯಾಕಾಂಡ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಒಂದೇ ಕುಟುಂಬದ ಐದು…
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಟೂರ್ನಿ ಅಂತಿಮ ಹಂತ ತಲುಪಿದ್ದು, ನಾಳೆ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ…
ಕನ್ನಡ ಚಿತ್ರರಂಗದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧ ಮೂರು ದಶಕಗಳ ಹಿಂದೆ ಗಂಭೀರ ಆರೋಪ ಮಾಡಿದ್ದ ನಟಿ ಬಿಂದಿಯಾ,…
ಭೀಮಾತೀರ ಪ್ರದೇಶ ಮತ್ತೆ ರಕ್ತದ ಮಡುವಾಗಿ ಮಾರ್ಪಟ್ಟಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಭೀಕರ ಹತ್ಯಾಕಾಂಡ…
ರಾಜ್ಯದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ…