ಆನೇಕಲ್ನಲ್ಲಿ ನಡೆದ ಜಿಮ್ ಟ್ರೈನರ್ ವಿಜಯ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಭಾವಿ ಉದ್ಯಮಿಯ ಪುತ್ರಿಯೊಂದಿಗಿನ ಪ್ರೇಮ ಸಂಬಂಧವೇ ಹತ್ಯೆಗೆ ಕಾರಣವಾಗಿರಬಹುದು ಎಂಬ ಅನುಮಾನಗಳು ತನಿಖೆಯಲ್ಲಿ ಕೇಳಿಬರುತ್ತಿವೆ. ಪ್ರಕರಣ ಸಂಬಂಧ ಈಗಾಗಲೇ ನಾಲ್ವರನ್ನು ಬಂಧಿಸಿರುವ ಬನ್ನೇರುಘಟ್ಟ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ವಿಜಯ್ ಕೆಲವು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಕೆ.ಆರ್.ಪುರಂನ ಜಿಮ್ನಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದನು. ಸುಮಾರು ಹತ್ತು ದಿನಗಳ ಹಿಂದೆ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಾಳೇಶ್ವರಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ವಿಜಯ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಲ್ ಡಿಟೇಲ್ಸ್, ಸಿಡಿಆರ್ ಹಾಗೂ ಲೊಕೇಶನ್ ಟವರ್ ಡಂಪ್ ಸೇರಿದಂತೆ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಆನೇಕಲ್ ಮೂಲದ ಶ್ರೀರಾಮ್, ಸುಮಿತ್, ವೆಂಕಟೇಶಯ್ಯ ಮತ್ತು ಬಾಬು ಎಂಬ ನಾಲ್ವರನ್ನು ಬಂಧಿಸಿದ್ದಾರೆ.
ಮೃತ ವಿಜಯ್ ಕುಟುಂಬದವರ ಆರೋಪದ ಪ್ರಕಾರ, ವಿಜಯ್ಗೆ ಉದ್ಯಮಿ ಕಾಮಿನೇನಿ ಪ್ರಸಾದ್ ಅವರ ಪುತ್ರಿಯೊಂದಿಗೆ ಆಪ್ತ ಸಂಬಂಧವಿದ್ದು, ಇದೇ ವಿಚಾರದಿಂದ ವೈಮನಸ್ಸು ಉಂಟಾಗಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕುಟುಂಬಸ್ಥರು ಕೋಟ್ಯಂತರ ರೂಪಾಯಿ ಸುಪಾರಿ ನೀಡಿ ಹತ್ಯೆ ನಡೆಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ವಿಜಯ್ ಸುಮಾರು ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ನಂತರ ಜಿಮ್ಗೆ ಬರುತ್ತಿದ್ದ ಉದ್ಯಮಿಯ ಪುತ್ರಿಯೊಂದಿಗೆ ಆತ ಸನ್ನಿಹಿತನಾಗಿದ್ದನೆಂದು ಹೇಳಲಾಗುತ್ತಿದೆ. ಈ ವಿಚಾರ ತಿಳಿದ ಬಳಿಕ ವಿಜಯ್ ಪತ್ನಿ ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದಳು ಎನ್ನಲಾಗಿದೆ.
ಇನ್ನೊಂದೆಡೆ ವಿಜಯ್ ಮತ್ತು ಯುವತಿ ಕೆಲಕಾಲ ಕಾಣೆಯಾಗಿದ್ದು, ಬಳಿಕ ಪುತ್ರಿಯ ಸಂಬಂಧದ ಬಗ್ಗೆ ತಿಳಿದ ಉದ್ಯಮಿ ಕಾಮಿನೇನಿ ಪ್ರಸಾದ್ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಇಬ್ಬರನ್ನೂ ಪತ್ತೆಹಚ್ಚಿ ಕುಟುಂಬದವರಿಗೆ ಒಪ್ಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆಯ ನಂತರ ವಿಜಯ್ಗೆ ಎಚ್ಚರಿಕೆ ನೀಡಲಾಗಿದ್ದು, ಕೆಲವರ ಮೂಲಕ ಹಲ್ಲೆ ಕೂಡ ನಡೆದಿತ್ತು ಎಂಬ ಆರೋಪಗಳೂ ಕೇಳಿಬಂದಿವೆ. ಆದರೂ ವಿಜಯ್ ಮತ್ತು ಯುವತಿ ತಮ್ಮ ಸಂಪರ್ಕ ಮುಂದುವರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಶ್ರೀರಾಮ್ ತನಿಖೆ ವೇಳೆ ಉದ್ಯಮಿ ಕಾಮಿನೇನಿ ಪ್ರಸಾದ್ ಹಾಗೂ ಇತರ ಕೆಲವರೊಂದಿಗೆ ನಡೆದ ಮಾತುಕತೆಗಳ ಕುರಿತು ಮಾಹಿತಿ ನೀಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಪ್ರಕರಣದ ಗಂಭೀರತೆಯನ್ನು ಮನಗಂಡು ಕೇಂದ್ರ ವಲಯ ಐಜಿಪಿ ಗಿರೀಶ್ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖೆಯ ಪ್ರಗತಿ ಪರಿಶೀಲಿಸಿದ್ದಾರೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದ್ದು, ಬಂಧಿತ ನಾಲ್ವರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಪ್ರಕರಣದಲ್ಲಿ ಉಲ್ಲೇಖವಾಗಿರುವ ಕೆಲ ಪ್ರಮುಖ ಆರೋಪಿಗಳು, ವಕೀಲ ಸೇರಿದಂತೆ, ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪ್ರಕರಣದ ಸಂಪೂರ್ಣ ಸತ್ಯ ತನಿಖೆಯ ಬಳಿಕವೇ ಹೊರಬರುವ ಸಾಧ್ಯತೆ ಇದ್ದು, ಯಾವುದೇ ಒತ್ತಡ ಅಥವಾ ಪ್ರಭಾವವಿಲ್ಲದೆ ನಿಷ್ಪಕ್ಷಪಾತ ತನಿಖೆ ನಡೆಸಿ ವಿಜಯ್ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಹಾಗೂ ಆಪ್ತರು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ಸ್ನೇಹಿತೆಯೊಬ್ಬಳ ಪ್ರೇಮ ವಿವಾದದ ನಡುವೆ ಅಮಾಯಕ ಯುವಕನೊಬ್ಬ…
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಳೇದಹಟ್ಟಿ ತಾಂಡದಲ್ಲಿ ನವವಿವಾಹಿತೆಯೊಬ್ಬರ ಅನುಮಾನಾಸ್ಪದ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮದುವೆಯಾಗಿ ಕೇವಲ ನಾಲ್ಕು…
ಹಳಿಯಾಳ: ಪಟ್ಟಣದ ಮೌರ್ಯ ಹೋಟೆಲ್ ಸಮೀಪ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿ, ಕರ್ತವ್ಯ ನಿರ್ವಹಣೆಗೆ ಬಂದಿದ್ದ ಪೊಲೀಸರ ಎದುರೇ ರಂಪಾಟ ನಡೆಸಿ…
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗೋಕುಲ ಗೌಡ ಸಾವನ್ನಪ್ಪಿದ ಪ್ರಕರಣಕ್ಕೆ…
ಹಳಿಯಾಳ: ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ಗಳು ಸೋಮವಾರ ಮುಂಜಾನೆ ಭಾರೀ ಸ್ಫೋಟಗೊಂಡ ಪರಿಣಾಮ ಹಲವು ಮನೆಗಳಿಗೆ…
ಯಲ್ಲಾಪುರ: ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ, ಪುಣೆ ಹಾಗೂ ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿದ್ದ ಅಡಿಕೆ…