‘ಹಾವಿನ ದ್ವೇಷ 12 ವರ್ಷ’ ಎಂಬ ಮಾತು ಇಲ್ಲಿ ಅಕ್ಷರಶಃ ನಿಜವಾದಂತಿದೆ. ತನ್ನ ಮಗನನ್ನು ಕೊಂದವನನ್ನು ಶಿಕ್ಷಿಸುವವರೆಗೂ ನೆಮ್ಮದಿ ಕಾಣದ ತಾಯಿಯೊಬ್ಬಳು ಬರೋಬ್ಬರಿ 12 ವರ್ಷ ಸೇಡಿನ ಬೆಂಕಿಯನ್ನು ಎದೆಯಲ್ಲಿ ಹೊತ್ತುಕೊಂಡಿದ್ದಳು. ಕೊನೆಗೆ ತನ್ನದೇ ಕಿರಿಯ ಮಗನನ್ನು ಬಳಸಿಕೊಂಡು, ಮಗನ ಹಂತಕನನ್ನು ನಡುರಸ್ತೆಯಲ್ಲೇ ಕೊಲೆ ಮಾಡಿಸಿ ಪ್ರತೀಕಾರ ತೀರಿಸಿಕೊಂಡಿದ್ದಾಳೆ.

ಹುಬ್ಬಳ್ಳಿಯಲ್ಲಿ ನಾಲ್ಕೈದು ದಿನಗಳ ಹಿಂದೆ ಹಾಡಹಗಲೇ ನಡೆದ ಭೀಕರ ಕೊಲೆಯ ತನಿಖೆ ನಡೆಸಿದ ಪೊಲೀಸರಿಗೆ, ಸಿನಿಮಾವನ್ನೂ ಮೀರಿಸುವಂತಹ ಸೇಡಿನ ಕಥೆ ಬಯಲಾಗಿದೆ.

2015ರ ಕೊಲೆ… ಎದೆಯಲ್ಲಿ ಉಳಿದ ಸೇಡು

2015ರಲ್ಲಿ ಎಗ್ ರೈಸ್ ಅಂಗಡಿ ನಡೆಸುತ್ತಿದ್ದ ಮಾರುತಿ ತಳಕಲ್ ಎಂಬ ಯುವಕನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ದಾದಾಪೀರ್ ಎಂಬಾತ ಆರೋಪಿಯಾಗಿದ್ದ. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ 2017ರಲ್ಲಿ ಆತ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ.

ನಂತರ ಎರಡೂ ಕುಟುಂಬಗಳ ನಡುವೆ ರಾಜಿ ನಡೆದಂತೆ ಕಂಡುಬಂದಿತ್ತು. ಆದರೆ ಮಾರುತಿಯ ತಾಯಿ ಶಕುಂತಲಾ ಮಾತ್ರ ಮಗನ ಸಾವನ್ನು ಮರೆತಿರಲಿಲ್ಲ. ದಾದಾಪೀರ್ ಪ್ರಾಣಭಯದಿಂದ ಊರು ಬಿಟ್ಟು ಹೋಗಿದ್ದರೂ, ಶಕುಂತಲಾಳ ಮನಸ್ಸಿನಲ್ಲಿದ್ದ ಸೇಡಿನ ಬೆಂಕಿ ಮಾತ್ರ ಆರಿರಲಿಲ್ಲ.

ಕಿರಿಯ ಮಗನಿಗೆ ಸೇಡಿನ ಪಾಠ!

ಹಿರಿಯ ಮಗನ ಹತ್ಯೆಯ ಸೇಡು ತೀರಿಸಿಕೊಳ್ಳಲು ಶಕುಂತಲಾ ತನ್ನ ಕಿರಿಯ ಮಗನನ್ನೇ ಬಳಸಿಕೊಂಡಿದ್ದಾಳೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಿರಿಯ ಮಗ ಚಿಕ್ಕವನಿದ್ದಾಗಿನಿಂದಲೇ ಆತನ ಮನಸ್ಸಿನಲ್ಲಿ ಅಣ್ಣನ ಸಾವಿನ ವಿಚಾರವನ್ನು ಬಿತ್ತುತ್ತಾ ಬಂದಿದ್ದಳು ಎನ್ನಲಾಗಿದೆ. ಆತ ಬೆಳೆದು ದೊಡ್ಡವನಾದ ಬಳಿಕ, ಅಣ್ಣನನ್ನು ಕೊಂದವನ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಪ್ರಚೋದಿಸಿದ್ದಾಳೆ ಎನ್ನಲಾಗಿದೆ.

ತಾಯಿಯ ಮಾತಿಗೆ ಒಪ್ಪಿದ ಕಿರಿಯ ಮಗ, ತನ್ನ ಸ್ನೇಹಿತ ವೀರೇಂದ್ರನನ್ನು ಜೊತೆಗಿಸಿಕೊಂಡಿದ್ದ. 2023ರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ರಾಜು ಚಲವಾದಿಯ ಮಗ ದೀಪ್ ಕೂಡ ದಾದಾಪೀರ್ ಮೇಲಿನ ದ್ವೇಷದಿಂದ ಇವರೊಂದಿಗೆ ಕೈಜೋಡಿಸಿದ್ದ ಎನ್ನಲಾಗಿದೆ.

ಧರ್ಮಸ್ಥಳಕ್ಕೆ ಹೋಗಿ ತಪ್ಪಿಸಿಕೊಳ್ಳುವ ಪ್ಲಾನ್!

ಕೊಲೆಗೂ ಮುನ್ನ ಆರೋಪಿಗಳು ಪಕ್ಕಾ ಸ್ಕೆಚ್ ಹಾಕಿದ್ದರು. ಆಗಸ್ಟ್ 28ರಂದು ದಾದಾಪೀರ್‌ನನ್ನು ಅಡ್ಡಗಟ್ಟಿ, ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.

ಆದರೆ ಕೊಲೆ ಮಾಡಿದ ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೂಡ ಶಕುಂತಲಾ ಒಂದು ಪ್ಲಾನ್ ರೂಪಿಸಿದ್ದಳು ಎನ್ನಲಾಗಿದೆ.

ಕೊಲೆ ಮಾಡಿದ ತಕ್ಷಣ ದಾರಿಯಲ್ಲೇ ಬಟ್ಟೆ ಬದಲಿಸಬೇಕು. ಅಲ್ಲಿಂದ ನೇರವಾಗಿ ಧರ್ಮಸ್ಥಳಕ್ಕೆ ತೆರಳಿ ಮುಡಿ ಕೊಡಬೇಕು. ಬಳಿಕ ಗುರುತು ಬದಲಾಗಿರುವ ಕಾರಣ ಯಾರಿಗೂ ಅನುಮಾನ ಬಾರದಂತೆ ಊರಿಗೆ ವಾಪಸ್ ಬರಬೇಕು ಎಂಬುದು ಪ್ಲಾನ್ ಆಗಿತ್ತು ಎನ್ನಲಾಗಿದೆ.

ತಾಯಿಯ ಸೂಚನೆಯಂತೆ ಆರೋಪಿಗಳು ಧರ್ಮಸ್ಥಳಕ್ಕೆ ತೆರಳಿ ತಲೆ ಬೋಳಿಸಿಕೊಂಡು ವಾಪಸ್ ಬಂದಿದ್ದರು.

ಪೊಲೀಸರ ತನಿಖೆಗೆ ಸಿಕ್ಕಿಬಿದ್ದ ಹಂತಕರು

ಆದರೆ ಆರೋಪಿಗಳು ಎಷ್ಟೇ ಜಾಣ್ಮೆಯಿಂದ ಸ್ಕೆಚ್ ಹಾಕಿದ್ದರೂ, ಹುಬ್ಬಳ್ಳಿ ಪೊಲೀಸರ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದ ಪೊಲೀಸ್ ತಂಡ ಪ್ರಕರಣದ ಪ್ರತಿಯೊಂದು ಸುಳಿವನ್ನೂ ಬೆನ್ನತ್ತಿ, ಕೊಲೆಯ ಹಿಂದಿನ ಸೇಡಿನ ಕಥೆಯನ್ನು ಬಯಲಿಗೆಳೆದಿದೆ. ಅಂತಿಮವಾಗಿ ತಾಯಿ ಶಕುಂತಲಾ, ಆಕೆಯ ಕಿರಿಯ ಮಗ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಹಿರಿಯ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು 12 ವರ್ಷ ಕಾದಿದ್ದ ತಾಯಿ ಕೊನೆಗೂ ತನ್ನ ಪ್ರತೀಕಾರ ತೀರಿಸಿಕೊಂಡಿದ್ದಾಳೆ. ಆದರೆ ಆ ಸೇಡಿನ ಬೆಂಕಿಯಲ್ಲಿ ಮತ್ತೊಬ್ಬ ಮಗನ ಭವಿಷ್ಯವೂ ಸುಟ್ಟುಹೋಗಿದ್ದು, ಕೊನೆಗೆ ತಾಯಿ-ಮಗ ಇಬ್ಬರೂ ಜೈಲು ಸೇರುವಂತಾಗಿದೆ.

Related News

error: Content is protected !!