ಕೋಲಾರ ತಾಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ಸಾಲದ ಹೊರೆ ಮತ್ತು ಬಡ್ಡಿ ಕಿರುಕುಳದಿಂದ ಒಂದೇ ಕುಟುಂಬ ಸಂಪೂರ್ಣವಾಗಿ ನಾಶವಾದ ಮನಕಲಕುವ ಘಟನೆ ನಡೆದಿದೆ. ಸ್ವಂತ ಮನೆ ಕಟ್ಟುವ ಕನಸಿನಿಂದ ಪಡೆದ ಸಾಲವೇ ಕೊನೆಗೆ ನಾಲ್ವರು ಕುಟುಂಬ ಸದಸ್ಯರ ಜೀವವನ್ನು ಬಲಿ ಪಡೆದಿದೆ.
ಆಟೋ ಚಾಲಕರಾಗಿದ್ದ ಸುರೇಶ್ ಹಾಗೂ ಅವರ ಪತ್ನಿ ಪ್ರಮೀಳಾ ಇಬ್ಬರು ಮಕ್ಕಳೊಂದಿಗೆ ಸುಖವಾಗಿ ಜೀವನ ಸಾಗಿಸುತ್ತಿದ್ದರು. ಸ್ವಂತ ಮನೆ ನಿರ್ಮಿಸಬೇಕೆಂಬ ಕನಸನ್ನು ನನಸು ಮಾಡಲು ಸುಮಾರು ₹15 ಲಕ್ಷ ಸಾಲ ಪಡೆದು ಮನೆ ಕಟ್ಟಲು ಆರಂಭಿಸಿದ್ದರು. ಆದರೆ, ಆದಾಯ ಕಡಿಮೆಯಾಗುತ್ತಿದ್ದಂತೆ ಸಾಲದ ಹೊರೆ ಹೆಚ್ಚಾಗಿ, ಹಣ ವಾಪಸ್ ನೀಡುವಂತೆ ಸಾಲಗಾರರು ಹಾಗೂ ಬಡ್ಡಿ ವಸೂಲಿಗಾರರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಈ ಮಾನಸಿಕ ಒತ್ತಡವನ್ನು ತಾಳಲಾರದೆ ಜುಲೈ 24ರಂದು ಪ್ರಮೀಳಾ ತಮ್ಮ ಇಬ್ಬರು ಮಕ್ಕಳಾದ ಸ್ವಪ್ನಾ ಮತ್ತು ಚರಣ್ ಅವರನ್ನು ಕರೆದುಕೊಂಡು ಗ್ರಾಮದ ಸಮೀಪದ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡ ಸುರೇಶ್ ತೀವ್ರ ಆಘಾತಕ್ಕೊಳಗಾಗಿದ್ದು, ಬದುಕಿನ ಮೇಲಿನ ಆಸೆಯನ್ನೇ ಕಳೆದುಕೊಂಡಿದ್ದರು.
ಕುಟುಂಬವನ್ನೆಲ್ಲ ಕಳೆದುಕೊಂಡ ನೋವಿನಿಂದ ಮನನೊಂದ ಸುರೇಶ್ ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ತಕ್ಷಣ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಮೃತಪಟ್ಟಿದ್ದಾರೆ. ಇದರೊಂದಿಗೆ ಒಂದೇ ಕುಟುಂಬದ ನಾಲ್ವರು ದಾರುಣ ಅಂತ್ಯ ಕಂಡಿರುವ ಘಟನೆ ಇಡೀ ಪ್ರದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಪ್ರಕರಣ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮವಾಗಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿ ಕುಟುಂಬದ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.
ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಗಳ ಕುರಿತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
