Categories: CrimeLatest

6 ವರ್ಷಗಳ ಬಳಿಕವೂ ಪರಿಹಾರ ನೀಡದ ಕೆಎಸ್‌ಆರ್‌ಟಿಸಿ; ಬಸ್ ಜಪ್ತಿಗೆ ಕೂಡ್ಲಿಗಿ ನ್ಯಾಯಾಲಯದ ಆದೇಶ

ಕೂಡ್ಲಿಗಿ (ವಿಜಯನಗರ): 2019ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯಾಲಯ ಆದೇಶಿಸಿದ್ದ ಪರಿಹಾರವನ್ನು ಹಲವು ವರ್ಷಗಳಾದರೂ ಪಾವತಿಸದ ಹಿನ್ನೆಲೆಯಲ್ಲಿ, ಕೆಎಸ್‌ಆರ್‌ಟಿಸಿ ಕೊಪ್ಪಳ ಡಿಪೋಗೆ ಸೇರಿದ ಬಸ್ ಅನ್ನು ಜಪ್ತಿ ಮಾಡುವಂತೆ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶಿಸಿದೆ.

2019ರ ನವೆಂಬರ್ 10ರಂದು ತಾಲೂಕಿನ ಕ್ಯಾಸನಕೇರಿ ಗ್ರಾಮದ ನಾಗಪ್ಪ (55) ಅವರು ಟಾಟಾ ಏಸ್ ವಾಹನದಲ್ಲಿ ಹೊಸಪೇಟೆಯಿಂದ ಕೂಡ್ಲಿಗಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, ಶಿವಪುರ ಗ್ರಾಮದ ಸಮೀಪ ಎದುರಿನಿಂದ ಬಂದ ಕೊಪ್ಪಳ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ನಾಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಸಂಬಂಧ ಮೃತರ ಪತ್ನಿ ಕೊಟ್ರಮ್ಮ ನೀಡಿದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ವಕೀಲ ಜಿ. ಸೀತಾರಾಮಗೌಡ ಅವರ ಮೂಲಕ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು.

ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ 2020ರ ಅಕ್ಟೋಬರ್ 16ರಂದು ನ್ಯಾಯಾಲಯವು ಮೃತ ನಾಗಪ್ಪ ಅವರ ಕುಟುಂಬಕ್ಕೆ ₹12 ಲಕ್ಷ ಪರಿಹಾರವನ್ನು ಕೆಎಸ್‌ಆರ್‌ಟಿಸಿ ಕೊಪ್ಪಳ ಡಿಪೋ ಪಾವತಿಸಬೇಕೆಂದು ಆದೇಶಿಸಿತ್ತು. ಆದರೆ ಆದೇಶ ಹೊರಬಿದ್ದ ಹಲವು ವರ್ಷಗಳಾದರೂ ಪರಿಹಾರ ಹಣವನ್ನು ನೀಡದ ಕಾರಣ, ಸಂತ್ರಸ್ತರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ವಿಷಯವನ್ನು ತಂದಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹಿರಿಯ ಶ್ರೇಣಿ ನ್ಯಾಯಾಧೀಶ ಜೆ. ಯೋಗೇಶ್ ಅವರು ಕೆಎಸ್‌ಆರ್‌ಟಿಸಿ ಬಸ್ ಜಪ್ತಿಗೆ ಆದೇಶ ಹೊರಡಿಸಿದರು. ಅದರಂತೆ ಜುಲೈ 17ರಂದು ಕೊಪ್ಪಳ ಡಿಪೋಗೆ ಸೇರಿದ ಬಸ್ ಕೂಡ್ಲಿಗಿ ಬಸ್ ನಿಲ್ದಾಣಕ್ಕೆ ಬಂದ ತಕ್ಷಣ, ನ್ಯಾಯಾಲಯದ ಅಮೀನ್ ಸಿಬ್ಬಂದಿ ಹಾಗೂ ಸಂತ್ರಸ್ತರ ಪರ ವಕೀಲರ ಸಮ್ಮುಖದಲ್ಲಿ ಬಸ್ ಅನ್ನು ಕಾನೂನುಬದ್ಧವಾಗಿ ಜಪ್ತಿ ಮಾಡಿ ನ್ಯಾಯಾಲಯದ ಆವರಣಕ್ಕೆ ಕೊಂಡೊಯ್ಯಲಾಯಿತು.

ಜಪ್ತಿ ಕಾರ್ಯಾಚರಣೆಯಲ್ಲಿ ವಕೀಲರಾದ ಜಿ. ಸೀತಾರಾಮಗೌಡ, ಜಿ.ಎಂ. ಮಲ್ಲಿಕಾರ್ಜುನಯ್ಯ, ನ್ಯಾಯಾಲಯದ ಅಮೀನ್ ಸಿಬ್ಬಂದಿ ಕೊಟ್ರೇಶ್, ನಾಗರಾಜ್, ಶೇಖ್ ಅಬೂಬಕರ್ ಹಾಗೂ ಮೃತ ನಾಗಪ್ಪ ಅವರ ಪತ್ನಿ ಕೊಟ್ರಮ್ಮ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ನ್ಯಾಯಾಲಯದ ಆದೇಶಗಳನ್ನು ಸರ್ಕಾರಿ ಸಂಸ್ಥೆಗಳು ಕೂಡ ಕಡ್ಡಾಯವಾಗಿ ಪಾಲಿಸಬೇಕೆಂಬ ಸಂದೇಶವನ್ನು ಈ ಕ್ರಮ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಭ್ರಷ್ಟರ ಬೇಟೆ

Recent Posts

ಪತಿಯನ್ನೇ ಕೊಲ್ಲಲು ಪತ್ನಿಯ ಸ್ಕೆಚ್‌! ಪ್ರಿಯಕರನ ಮೊಬೈಲ್‌ನಲ್ಲಿ ಸಿಕ್ತು ಶಾಕಿಂಗ್ ಸಾಕ್ಷಿ..!

ಸೂರ್ಯಾಪೇಟೆ: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತಿಯನ್ನೇ ಕೊಲೆ ಮಾಡಲು ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಸಂಚು…

15 hours ago

ಗಂಡ ನೈಟ್ ಡ್ಯೂಟಿಗೆ ಹೋದಾಗ ಮಕ್ಕಳಿಗೆ ನಿದ್ರೆ ಗುಳಿಗೆ; ಲವ್ವರ್ ಜೊತೆ ಪತ್ನಿಯ ಚಕ್ಕಂದ.. ಮಧ್ಯರಾತ್ರಿ ಮನೆಗೆ ಬಂದ ಗಂಡನಿಗೆ ಕಾದಿತ್ತು ಘೋರ ದುರಂತ!

ಸೋನ್‌ಭದ್ರ: ಗಂಡ ನೈಟ್ ಡ್ಯೂಟಿಗೆ ಹೋದ ಬಳಿಕ ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ, ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಪತ್ನಿ, ಕೊನೆಗೆ…

15 hours ago

ರೈಲ್ವೆ ಕಾಮಗಾರಿ ಕಾರ್ಮಿಕರಿದ್ದ ಬೊಲೆರೋ ಪಲ್ಟಿ: ಎಂಟು ಮಂದಿಗೆ ಗಂಭೀರ ಗಾಯ

ಗೌರಿಬಿದನೂರು: ರೈಲ್ವೆ ಇಲಾಖೆಯ ಕಾಮಗಾರಿ ಕೆಲಸಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ಬೊಲೆರೋ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ…

15 hours ago

ಹುಬ್ಬಳ್ಳಿ–ಧಾರವಾಡದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ: 1,339 ಮಂದಿ ವಿರುದ್ಧ ಪ್ರಕರಣ

ಹುಬ್ಬಳ್ಳಿ–ಧಾರವಾಡ: ಅವಳಿ ನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತುಹಾಕಲು ಹುಬ್ಬಳ್ಳಿ–ಧಾರವಾಡ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ಮೂರು…

2 days ago

ವಿದ್ಯುತ್ ತಂತಿ ಅಳವಡಿಸಿ ಎರಡು ಜಿಂಕೆಗಳ ಬಲಿ: ಜಮೀನಿನಲ್ಲೇ ಮಾಂಸ ಬೇಯಿಸುತ್ತಿದ್ದ ಆರೋಪಿಗಳು!

ಸಾಗರ: ಜಮೀನಿಗೆ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿ ಎರಡು ಗಂಡು ಜಿಂಕೆಗಳನ್ನು ವಿದ್ಯುತ್ ಸ್ಪರ್ಶದಿಂದ ಸಾಯಿಸಿ, ಅವುಗಳ ಮಾಂಸವನ್ನು ಜಮೀನಿನಲ್ಲೇ…

2 days ago

ಅರ್ಚಕ ವಿಶ್ವೇಶ್ವರ ಭಟ್ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಕುಮಟಾ: ನಗರದ ಪ್ರಸಿದ್ಧ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಜಿಲ್ಲಾ ಮತ್ತು…

2 days ago