
ಬೆಂಗಳೂರು: ನಗರದ ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದ ಭೀಕರ ಹತ್ಯೆ ಪ್ರಕರಣ ಸ್ಥಳೀಯರಲ್ಲಿ ಬೆಚ್ಚಿಬೀಳಿಸುವಂತಾಗಿದೆ. ಮಚ್ಚಿನಿಂದ ಮನಬಂದಂತೆ ಕೊಚ್ಚಿ 35 ವರ್ಷದ ವಿಜಯಕುಮಾರ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.
ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ, ಆರೋಪಿ ಧನಂಜಯ ಅಲಿಯಾಸ್ ಜಯರಾಮ ಮತ್ತು ಅವನ ಗ್ಯಾಂಗ್ ಈ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧದ ವೈಮನಸ್ಸೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ವಿಜಯಕುಮಾರ್ ಸುಮಾರು ಹತ್ತು ವರ್ಷಗಳ ಹಿಂದೆ ಆಶಾ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಆದರೆ, ಆರೋಪಿ ಧನಂಜಯ ವಿಜಯಕುಮಾರ್ ಪತ್ನಿ ಆಶಾ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದಾನೆಂಬ ಆರೋಪವಿದೆ. ಧನಂಜಯ ಮತ್ತು ಆಶಾ ಒಟ್ಟಿಗೆ ಇರುವ ಫೋಟೋ ವಿಜಯಕುಮಾರ್ ಕೈಗೆ ಸಿಕ್ಕಿದ್ದು, ಇದರಿಂದ ಇಬ್ಬರ ಮಧ್ಯ ಗಲಾಟೆ ತೀವ್ರಗೊಂಡಿತ್ತು. ವಿಚಿತ್ರವೆಂದರೆ, ಧನಂಜಯ ಮತ್ತು ವಿಜಯಕುಮಾರ್ ಇಬ್ಬರೂ ಬಾಲ್ಯದ ಸ್ನೇಹಿತರು.
ವಿಜಯಕುಮಾರ್ ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು, ಧನಂಜಯ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸ್ನೇಹಿತನ ಪತ್ನಿಯ ಜೊತೆಗಿನ ಸಂಬಂಧಕ್ಕೆ ವಿರೋಧ ವ್ಯಕ್ತವಾದ ಬಳಿಕ, ಧನಂಜಯ ಆಶಾಗೆ ಬೆದರಿಕೆ ಹಾಕಿ, “ನನ್ನೊಂದಿಗೆ ಸಹಕರಿಸದಿದ್ದರೆ ನಿನ್ನ ಕುಟುಂಬವನ್ನು ನಾಶಮಾಡುತ್ತೇನೆ” ಎಂದು ಎಚ್ಚರಿಸಿದ್ದಾನೆಂಬ ಮಾಹಿತಿ ದೊರೆತಿದೆ.
ಈ ಹಿನ್ನೆಲೆಯಲ್ಲಿ, ವಿಜಯಕುಮಾರ್ ಹತ್ಯೆಗೆ ಧನಂಜಯ ಪೂರ್ವನಿಯೋಜಿತ ಸ್ಕೆಚ್ ಹಾಕಿದ್ದಾನೆಂದು ಶಂಕಿಸಲಾಗಿದೆ. ಆಗಸ್ಟ್ 11ರ ರಾತ್ರಿ 8 ಗಂಟೆ ಸುಮಾರಿಗೆ, ವಿಜಯಕುಮಾರ್ ಮನೆಬಿಟ್ಟು ಹೊರಬಂದ ಕ್ಷಣಕ್ಕೆ, ಹೊಂಚುಹಾಕಿ ಕುಳಿತಿದ್ದ ಧನಂಜಯ ಮತ್ತು ಅವನ ತಂಡ ಹಠಾತ್ ದಾಳಿ ನಡೆಸಿದೆ. ಮಚ್ಚಿನಿಂದ ನಿರ್ದಯವಾಗಿ ಕೊಚ್ಚಿ ಹತ್ಯೆಗೈದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಪ್ರಸ್ತುತ, ಪತ್ನಿ ಆಶಾವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಆರೋಪಿ ಧನಂಜಯ ಮತ್ತು ಅವನ ಸಹಚರರಿಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ. ಪ್ರಕರಣವನ್ನು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಬಾಲ್ಯದ ಸ್ನೇಹಿತನ ಹೆಂಡತಿಯೊಂದಿಗೆ ಸಂಬಂಧ ಬೆಳೆಸಿ, ಅದರ ವಿಚಾರಕ್ಕೆ ಪ್ರಶ್ನಿಸಿದ ಗೆಳೆಯನನ್ನೇ ಕೊಚ್ಚಿ ಕೊಂದ ಧನಂಜಯನ ಕ್ರೂರ ಕೃತ್ಯವು ಸ್ಥಳೀಯರಲ್ಲಿ ಭಾರೀ ಆಕ್ರೋಶ ಮೂಡಿಸಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392






