ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಭೀಕರ ಹತ್ಯಾಕಾಂಡ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಜನರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
10 ಆರೋಪಿಗಳ ಬಂಧನ
ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಮಾಹಿತಿ ನೀಡಿರುವಂತೆ, ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹತ್ತು ಮಂದಿಯನ್ನು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ್ ತಾಲೂಕಿನ ಕೂಡ್ಲಾ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಘಟನೆಯಲ್ಲಿ ಹಂತಕರ ದಾಳಿಯಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೀಮಾತೀರದಲ್ಲಿ ಮತ್ತೊಂದು ರಕ್ತರಂಜಿತ ಅಧ್ಯಾಯ
ಭೀಮಾತೀರ ಪ್ರದೇಶವು ಹಳೆಯ ವೈಷಮ್ಯ, ಸೇಡು ಮತ್ತು ಹತ್ಯೆಗಳ ಇತಿಹಾಸದಿಂದಲೇ ಕುಖ್ಯಾತಿ ಪಡೆದಿದೆ. ಕುಟುಂಬ, ಸಂಬಂಧಿಕರು ಅಥವಾ ನೆರೆಹೊರೆಯವರ ನಡುವಿನ ದ್ವೇಷಗಳು ಇಲ್ಲಿ ಅನೇಕ ಬಾರಿ ರಕ್ತಪಾತಕ್ಕೆ ಕಾರಣವಾಗಿವೆ. ಇದೀಗ ಅದೇ ಪ್ರದೇಶದಲ್ಲಿ ಮತ್ತೊಂದು ಭೀಕರ ಹತ್ಯಾಕಾಂಡ ನಡೆದಿದ್ದು ಜನರಲ್ಲಿ ಆತಂಕ ಮೂಡಿಸಿದೆ.
25 ಎಕರೆ ಜಮೀನು ವಿವಾದವೇ ಹತ್ಯೆಗೆ ಕಾರಣ
ಸುಮಾರು 25 ಎಕರೆ ವಿವಾದಿತ ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹಲವು ವರ್ಷಗಳಿಂದ ವೈಮನಸ್ಸು ಇತ್ತು. ಗೊಳಗಿ ಕುಟುಂಬದ ವಿರೋಧದ ನಡುವೆಯೂ ನಿರಾಳೆ ಕುಟುಂಬ ಆ ಜಮೀನನ್ನು ಖರೀದಿಸಿತ್ತು ಎನ್ನಲಾಗಿದೆ.
ಜಮೀನನ್ನು ಕೃಷಿಗೆ ಸಜ್ಜುಗೊಳಿಸುವ ಕೆಲಸಕ್ಕಾಗಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ ನಿರಾಳೆ, ಅವರ ಸಹೋದರರಾದ ದುಂಡಪ್ಪ ನಿರಾಳೆ ಹಾಗೂ ಶಿವಪುತ್ರಪ್ಪ ನಿರಾಳೆ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಜೆಸಿಬಿ ಚಾಲಕ ಶಬ್ಬೀರ್ ಕೂಡ ಕೂಲಿ ಕೆಲಸಕ್ಕಾಗಿ ಸ್ಥಳದಲ್ಲಿದ್ದರು.
ಸಿನಿಮಾವನ್ನೇ ಮೀರಿಸಿದ ಹತ್ಯೆಯ ಕ್ರೌರ್ಯ
ನಿರಾಳೆ ಕುಟುಂಬದ ಸದಸ್ಯರು ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಪಡೆದ ಅಪ್ಪುಗೌಡ ಮತ್ತು ಆತನ ಸಹಚರರು ಮಾರಕಾಸ್ತ್ರಗಳು ಹಾಗೂ ಡಬಲ್ ಬ್ಯಾರಲ್ ಬಂದೂಕುಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಮೊದಲು ಅಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿ, ಅವರು ನೆಲಕ್ಕುರುಳಿದ ನಂತರ ಮಚ್ಚುಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಜನರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.
ಈ ದಾಳಿಯಲ್ಲಿ ನಿರಾಳೆ ಕುಟುಂಬದ ಸದಸ್ಯರ ಜೊತೆಗೆ ಯಾವುದೇ ವೈಷಮ್ಯವಿಲ್ಲದ ಜೆಸಿಬಿ ಚಾಲಕ ಶಬ್ಬೀರ್ ಕೂಡ ಸಾವನ್ನಪ್ಪಿರುವುದು ಮತ್ತಷ್ಟು ದುರಂತಕ್ಕೆ ಕಾರಣವಾಗಿದೆ.
ಹಳೆಯ ವೈಷಮ್ಯದ ಕಿಡಿ
ಪ್ರಮುಖ ಆರೋಪಿ ಅಪ್ಪುಗೌಡ, ಈ ಹಿಂದೆ ಭೀಮಾತೀರದಲ್ಲಿ ನಡೆದಿದ್ದ ಹತ್ಯಾಕಾಂಡದಲ್ಲಿ ಸಾವಿಗೀಡಾಗಿದ್ದ ಮಾಣಕಪ್ಪ ಮಾಸ್ತರ್ ಅವರ ಸಂಬಂಧಿ ಎಂದು ತಿಳಿದುಬಂದಿದೆ. ಹಳೆಯ ವೈಷಮ್ಯ ಮತ್ತು ಸೇಡಿನ ಭಾವನೆಯೇ ಈ ಕೃತ್ಯದ ಹಿಂದಿನ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ತನಿಖೆಗೆ ಚುರುಕು
ಘಟನೆ ಬೆಳಕಿಗೆ ಬಂದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಕೋ ತಂಡ, ಬೆರಳಚ್ಚು ತಜ್ಞರು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ ಕಾರ್ಯ ನಡೆಸಿದ್ದಾರೆ.
ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ಘಟನೆಯ ನಂತರ ಗೋವಿಂದಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮೂರು ಡಿಎಆರ್ ತುಕಡಿಗಳು ಹಾಗೂ ನಾಲ್ಕು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.
ಕುಟುಂಬಸ್ಥರ ಆಕ್ರಂದನ
ಹತ್ಯೆಯಲ್ಲಿ ಮೃತಪಟ್ಟ ಆರು ಮಂದಿಯ ಮೃತದೇಹಗಳನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಒಂದೇ ಕುಟುಂಬದ ಐದು ಸದಸ್ಯರನ್ನು ಕಳೆದುಕೊಂಡ ನಿರಾಳೆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ.
ನಂಜನಗೂಡು: ಜಮೀನಿಗೆ ತೆರಳಿದ್ದ 63 ವರ್ಷದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ…
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಟೂರ್ನಿ ಅಂತಿಮ ಹಂತ ತಲುಪಿದ್ದು, ನಾಳೆ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ…
ಕನ್ನಡ ಚಿತ್ರರಂಗದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧ ಮೂರು ದಶಕಗಳ ಹಿಂದೆ ಗಂಭೀರ ಆರೋಪ ಮಾಡಿದ್ದ ನಟಿ ಬಿಂದಿಯಾ,…
ಭೀಮಾತೀರ ಪ್ರದೇಶ ಮತ್ತೆ ರಕ್ತದ ಮಡುವಾಗಿ ಮಾರ್ಪಟ್ಟಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಭೀಕರ ಹತ್ಯಾಕಾಂಡ…
ರಾಜ್ಯದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ…
ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಪ್ರಕ್ರಿಯೆ ಇದೀಗ ಅಂತಿಮ ಹಂತ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ…