ಬೆಳಗಾವಿ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅನುಷ್ಠಾನದ ಕುರಿತು ನೈರುತ್ಯ ಆರ್ಟ ಮೀಡಿಯಾ ಸಂಸ್ಥೆ (ಬೆಂಗಳೂರು) ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಮೌಲ್ಯಮಾಪನ ಅಧ್ಯಯನದ ಭಾಗವಾಗಿ ಸಂತ್ರಸ್ತರೊಂದಿಗೆ ವಿಶೇಷ ಗುಂಪು ಚರ್ಚೆ ನಡೆಯಿತು.

ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ದೌರ್ಜನ್ಯ ತಡೆ ಕಾಯಿದೆಯ ಪರಿಣಾಮಕಾರಿತ್ವ, ಸಂತ್ರಸ್ತರಿಗೆ ದೊರೆಯುತ್ತಿರುವ ಸರ್ಕಾರಿ ಸೌಲಭ್ಯಗಳು, ಪರಿಹಾರ ಹಾಗೂ ಕಾನೂನು ನೆರವು ಸೇರಿದಂತೆ ವಿವಿಧ ವಿಚಾರಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಚನ್ನಯ್ಯನವರ್, ಪತ್ರಾಂಕಿತ ವ್ಯವಸ್ಥಾಪಕ ಎಂ.ಬಿ. ಹೊಸಮನಿ, ಡಿಸಿಆರ್‌ಇ (DCIR) ಪೊಲೀಸ್ ಇಲಾಖೆಯ ಅಧಿಕಾರಿ ರಂಜಿತ್ ಗಿಲ್ ಹಾಗೂ ವಕೀಲ ಎ.ಡಿ. ಕೋಳಿ ಭಾಗವಹಿಸಿದ್ದರು. ಅಧಿಕಾರಿಗಳು ಮತ್ತು ವಕೀಲರು ಸಂತ್ರಸ್ತರ ಅಹವಾಲುಗಳನ್ನು ಆಲಿಸಿ, ಕಾಯಿದೆಯ ಅನುಷ್ಠಾನಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಮಾಹಿತಿ ನೀಡಿದರು.

ನೈರುತ್ಯ ಆರ್ಟ ಮೀಡಿಯಾ ಸಂಸ್ಥೆಯ ಬೆಳಗಾವಿ ಪ್ರತಿನಿಧಿ ವೈಶಾಲಿ (ಗೀತಾ) ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ರಾಜಶೇಖರ್ ಲಟ್ಟಿ, ಮೋಹನ್ ದುಗಾಡೆ ಹಾಗೂ ಪ್ರಜ್ವಲ್ ಕೋಲಕರ ಸೇರಿದಂತೆ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಂತ್ರಸ್ತರ ಅನುಭವಗಳು, ಸಮಸ್ಯೆಗಳು ಹಾಗೂ ಅವರಿಗೆ ದೊರೆಯುತ್ತಿರುವ ನೆರವಿನ ಕುರಿತು ನೇರವಾಗಿ ಮಾಹಿತಿ ಸಂಗ್ರಹಿಸುವ ಮೂಲಕ ಕಾಯಿದೆಯ ಅನುಷ್ಠಾನದ ವಾಸ್ತವ ಸ್ಥಿತಿಯನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಈ ಗುಂಪು ಚರ್ಚೆ ನಡೆಸಲಾಯಿತು.

Related News

error: Content is protected !!